
ಚಾಮರಾಜನಗರ: ಸುವರ್ಣಾವತಿ ನದಿಯಲ್ಲಿ ಸೋಮವಾರ ಮೀನು ಹಿಡಿಯಲು ಹೋಗಿದ್ದಾಗ ಆಕಸ್ಮಿಕವಾಗಿ ತೆಪ್ಪ ಮುಳಗಿ ನಾಪತ್ತೆಯಾಗಿರುವ ಮೀನುಗಾರ ಶಿವಸ್ವಾಮಿ ಇದುವರೆಗೂ ಪತ್ತೆಯಾಗಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಫಲ ನೀಡಿಲ್ಲ. ಈ ಮಧ್ಯೆ ನದಿಯೊಳಗೆ ಮುಳುಗಿರುವ ಶಿವಸ್ವಾಮಿಯ ದೇಹವನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಅಟ್ಟಗೂಳಿಪುರದ ಟೋಲ್ ಕೇಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬುಡಕಟ್ಟು ಸಮುದಾಯಕ್ಕೆ ಸೇರಿರುವ ಶಿವಸ್ವಾಮಿಗೆ ಪತ್ನಿ ಹಾಗೂ ಒಂದು ವರ್ಷದ ಮಗುವಿದ್ದು ತೀವ್ರ ಆತಂಕದಲ್ಲಿದ್ದಾರೆ. ಶಿವಸ್ವಾಮಿ ನದಿಯೊಳಗೆ ಮುಳುಗಿ ಮೂರು ದಿನಗಳು ಕಳೆದರೂ ದೇಹ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸುವರ್ಣಾವತಿ ನದಿ ಸುಮಾರು 50 ಅಡಿ ಆಳವಿದ್ದು ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ, ಅಗ್ನಿಶಾಮಕ ಸಿಬ್ಬಂದಿ ನಿರಂತರ ಶೋಧ ನಡೆಸುತ್ತಿದ್ದರೂ ಫಲ ಸಿಕ್ಕಿಲ್ಲ. ನದಿಯ ತಳಭಾಗದಲ್ಲಿ ದೇಹ ಸಿಲುಕಿರುವ ಶಂಕೆ ಇದ್ದು ಶೋಧ ಕಾರ್ಯ ನಡೆಯುತ್ತಿದೆ. ಗುರುವಾರವೂ ಶೋಧ ನಡೆಯಲಿದ್ದು ಅಗತ್ಯಬಿದ್ದರೆ ಮುಳುಗು ತಜ್ಞರನ್ನು ಕರೆಸಿಕೊಳ್ಳಲಾಗುವುದು’ ಎಂದು ಡಿವೈಎಸ್ಪಿ ಸ್ನೇಹಾ ರಾಜ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.