ADVERTISEMENT

ಯಳಂದೂರು | ಕೋವಿಡ್: ವಿಶೇಷ ವಾರ್ಡ್ ಸಿದ್ಧ

ಆತಂಕ ಬೇಕಿಲ್ಲ: ನಿರ್ಲಕ್ಷ್ಯ ಸಲ್ಲದು, ಸ್ವಚ್ಛತೆಗೆ ಒತ್ತು ನೀಡಿ, ಮಾಸ್ಕ್ ಧರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 13:38 IST
Last Updated 29 ಮೇ 2025, 13:38 IST
ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ತೀವ್ರ ನಿಗಾ ಘಟಕವನ್ನು ತಜ್ಞ ವೈದ್ಯ ನಾಗೇಂದ್ರ ಪರಿಶೀಲಿಸಿದರು
ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ತೀವ್ರ ನಿಗಾ ಘಟಕವನ್ನು ತಜ್ಞ ವೈದ್ಯ ನಾಗೇಂದ್ರ ಪರಿಶೀಲಿಸಿದರು   

ಯಳಂದೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲೂ ಅಗತ್ಯ ಸಿದ್ಧತೆ ನಡೆಸಿದೆ. ವಿಶೇಷ ಮೀಸಲು ವಾರ್ಡ್ ಸಜ್ಜುಗೊಳಿಸಿದೆ. ಇಲ್ಲಿನ ವಾರ್ಡ್ ಒಂದರಲ್ಲಿ ಮೂಲ ಸೌಕರ್ಯ ಕಲ್ಪಿಸಿ ತೀವ್ರ ನಿಗಾ ಘಟಕ ಸಿದ್ಧಪಡಿಸಿದೆ.

ತಾಲ್ಲೂಕಿನಲ್ಲಿ ವಾರಪೂರ್ತಿ ಉಷ್ಣಾಂಶ ಕುಸಿದು ತಲೆಬೇನೆ, ಚಳಿ, ಜ್ವರ ತಪಾಸಣೆಗೆ ರೋಗಿಗಳು ಬರುತ್ತಿದ್ದಾರೆ. ಅವರ ಪರೀಕ್ಷೆ ನಡೆಯುತ್ತಿದೆ. ಸದ್ಯ, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ರೋಗಿಗಳು ಕಂಡುಬಂದಿಲ್ಲ. ಈ ನಡುವೆಯೂ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಚಿಕಿತ್ಸೆ ನೀಡಲು ವೈದ್ಯರು ಮತ್ತು ದಾದಿಯರು ನಿಯೋಜನೆಗೊಂಡಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ವಿಶೇಷ ಐಸಿಯು ವಾರ್ಡ್ ರಚಿಸಲಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಕುಸಿದಿದ್ದು ಸಾಮಾನ್ಯ ಜ್ವರ, ನೆಗಡಿ ಬಂದರೆ ಆತಂಕ ಪಡಬೇಕಿಲ್ಲ. ಕೋವಿಡ್ ಹೊಸ ಅಲೆಯ ಬಗ್ಗೆ ಭಯ ಬೇಕಿಲ್ಲ. ಆದರೆ, ನಿರ್ಲಕ್ಷಿಸದೇ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಜನ ದಟ್ಟಣೆ ಸಂದರ್ಭ ಮಾಸ್ಕ್ ಧರಿಸಿ ಎಂದು ಮಕ್ಕಳ ತಜ್ಞ ಡಾ. ನಾಗೇಂದ್ರಮೂರ್ತಿ ಹೇಳಿದರು.

ADVERTISEMENT

ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದೆ. ಇದಕ್ಕೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಪಿಪಿಟಿ ಕಿಟ್, ಮಾಸ್ಕ್, ಆಕ್ಸಿಜನ್ ಘಟಕ ಸಿದ್ಧಮಾಡಿ ಇಟ್ಟುಕೊಳ್ಳಲಾಗಿದೆ. ಯಾವುದಕ್ಕೂ ತೊಂದರೆ ಇಲ್ಲ. ಶಂಕಿತ ಕೋವಿಡ್ ರೋಗಿಗಳು ಕಂಡುಬಂದರೆ ಮೂಗು ಮತ್ತು ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಒಳಪಡಿಲಾಗುವುದು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.