ಚಾಮರಾಜನಗರ: ರಾಜ್ಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಿಗದಿಯಂತೆ ನಡೆಯುತ್ತದೆ ಎಂದು ಪ್ರಾಥಮಿಕ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸ್ಪಷ್ಟಪಡಿಸಿದರು.
ನಗರದ ದೀನಬಂಧು ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ’ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ನಿಂದಾಗಿ ಶಾಲೆಗಳನ್ನು ಮುಚ್ಚಬೇಕಾಯಿತು. ಭಗವಂತನ ಆಶೀರ್ವಾದಿಂದ ನಮ್ಮಲ್ಲಿ ಅಂತಹ ಪರಿಸ್ಥಿತಿ ಉದ್ಭವವಾಗಿಲ್ಲ. ಶೇ 99ರಷ್ಟು ಶಾಲೆಗಳು ತೆರೆದಿವೆ. ಮಕ್ಕಳ ಹಾಜರಾತಿಯೂ ಚೆನ್ನಾಗಿದೆ. ಹಾಗಾಗಿ, ಒಂದು ದಿನವೂ ಹೆಚ್ಚು ಕಡಿಮೆಯಾಗದೆ ಪರೀಕ್ಷೆ ನಡೆಯಲಿದೆ‘ ಎಂದು ಹೇಳಿದರು.
’ಮಕ್ಕಳಿಗೆ ಕಷ್ಟವಾಗುವ ವಿಜ್ಞಾನವನ್ನು ಸುಲಭವಾಗಿ ಕಲಿಸಲು ದೀನ ಬಂಧು ಸಂಸ್ಥೆಯಲ್ಲಿ ಮಾಡಿರುವ ವಿಜ್ಞಾನ ಸಂಕೀರ್ಣ ಅತ್ಯುತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಎನ್ಜಿಒಗಳು ಈ ಪ್ರಯತ್ನ ಮಾಡಿವೆ. ಸರ್ಕಾರವು ಎನ್ಜಿಒಗಳ ಸಹಕಾರದೊಂದಿಗೆ ಪ್ರತಿ ತಾಲ್ಲೂಕಿನಲ್ಲಿ ಇಂತಹ ಒಂದೊಂದು ವಿಜ್ಞಾನ ಸಂಕೀರ್ಣವನ್ನು ಸ್ಥಾಪನೆ ಮಾಡಲು ಸಾಧ್ಯವೇ ಎಂಬುದನ್ನು ಚರ್ಚಿಸಲಾಗುವುದು‘ ಎಂದರು.
’ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪಿಸುವುದಕ್ಕಾಗಿ ಒಂದೊಂದು ಶಾಲೆಗೆ ₹20 ಲಕ್ಷ ನೀಡುತ್ತಿದ್ದಾರೆ. ಮಕ್ಕಳು ವಿಜ್ಞಾನವನ್ನು ಪ್ರಯೋಗದ ಮೂಲಕ ಕಲಿತುಕೊಳ್ಳಬೇಕು. ಕೌಶಲ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.ದೀನ ಬಂಧು ಸಂಸ್ಥೆಯಲ್ಲಿ ಜಯದೇವ ಅವರು ಇದಕ್ಕಿಂತಲೂ ಮೀರಿದ ಕೆಲಸ ಮಾಡಿದ್ದಾರೆ. ಅವರೊಂದಿಗೆ ಕುಳಿತು ಚರ್ಚಿಸಿ ಈ ಬಗ್ಗೆ ತೀರ್ಮಾನಿಸಲಾಗುವುದು‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.