ADVERTISEMENT

ಗುಂಡ್ಲುಪೇಟೆ: ಚಿರತೆ ದಾಳಿಗೆ ಕರು, ಹಸು ಸಾವು

ಸೆರೆ ಹಿಡಿಯದಿದ್ದರೆ ಮುತ್ತಿಗೆ ಎಚ್ಚರಿಕೆ, ರೈತರ ಆತಂಕ, ಸೂಕ್ತ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:39 IST
Last Updated 16 ಡಿಸೆಂಬರ್ 2025, 6:39 IST
ಚಿರತೆ ದಾಳಿಗೆ ಕರು ಮೃತಪಟ್ಟಿರುವುದು
ಚಿರತೆ ದಾಳಿಗೆ ಕರು ಮೃತಪಟ್ಟಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹುಲಿ ದಾಳಿ ನಡುವೆ ಚಿರತೆ ಉಪಟಳ ಮುಂದುವರೆದಿದ್ದು, ಕೆ.ಕೆ.ಹುಂಡಿಯಲ್ಲಿ ಎರಡು ಕರು ಮತ್ತು ಶಿವಪುರದಲ್ಲಿ ಒಂದು ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ತಾಲ್ಲೂಕಿನ ಕೆ.ಕೆ.ಹುಂಡಿಯ ಪುಟ್ಟಮಾದೇಗೌಡ ಎಂಬುವರ ಎರಡು ಕರುಗಳು ಚಿರತೆ ದಾಳಿಗೆ ಮೃತಪಟ್ಟಿವೆ. ಗ್ರಾಮದ ಜನವಸತಿ ಪ್ರದೇಶದಲ್ಲೇ ಘಟನೆ ನಡೆದಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಕೂಡಲೇ ಚಿರತೆ ಸೆರೆ ಹಿಡಿಯಬೇಕು. ಕರು ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಸ್ಥಳೀಯ ರೈತ ಮುಖಂಡರು ಒತ್ತಾಯಿಸಿದ್ದಾರೆ.

ADVERTISEMENT

ಶಿವಪುರದಲ್ಲಿ ಕರು ಸಾವು: ತಾಲೂಕಿನ ಶಿವಪುರದ ಮಹೇಶ್ ಎಂಬ ರೈತರ ಜಮೀನಿನಲ್ಲಿ ಸೋಮವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ ಕರು ಎಳೆದೋಯ್ದು ಅರ್ಧ ಭಾಗ ತಿಂದು ಕೊಂದು ಹಾಕಿದೆ. ಇದರಿಂದ ಮಾಲೀಕರಿಗೆ ನಷ್ಟ ಉಂಟಾಗಿದ್ದು, ಸೂಕ್ತ ಪಡಿಹಾರ ನೀಡಬೇಕು ಶಿವಪುರ ಮಂಜು ಆಗ್ರಹಿಸಿದ್ದಾರೆ.

‘ಜಮೀನುಗಳ ಕೊಟ್ಟಿಗೆಯಲ್ಲಿನ ಕರು, ಹಸುಗಳ ಮೇಲೆ ಚಿರತೆ ರಾತ್ರಿ ಸಮಯದಲ್ಲಿ ದಾಳಿಗೆ ಮುಂದಾಗುತ್ತಿರುವ ಹಿನ್ನಲೆ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಹಂಗಳಪುರ, ಬೊಮ್ಮಲಾಪುರ, ಕೆ.ಕೆ.ಹುಂಡಿ, ಶಿವಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಹುಲಿ, ಚಿರತೆ ಉಪಟಳ ಹೆಚ್ಚಿದ್ದು, ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡಿ ಕೊಂದು ಹಾಕುತ್ತಿದೆ. ಘಟನೆಗಳು ಹೆಚ್ಚಳವಾಗುತ್ತಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ. ನೆಪ ಮಾತ್ರಕ್ಕೆ ಎಂಬಂತೆ ದಾಳಿ ನಡೆದ ಸ್ಥಳದಲ್ಲಿ ಬೋನ್ ಇರಿಸಿ ತೆರಳುತ್ತಿದ್ದಾರೆ. ಕೂಡಲೇ ಹುಲಿ, ಚಿರತೆಗಳನ್ನು ಸೆರೆ ಹಿಡಿಯದಿದ್ದರೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಶಿವಪುರ ಮಂಜು, ಸುನೀಲ್ ಮೂಡ್ಲು ಎಚ್ಚರಿಸಿದರು.