ಕೊಳ್ಳೇಗಾಲ: ತಾಲ್ಲೂಕಿನ ಹೊಂಡರಬಾಳು, ಮಧುವನಹಳ್ಳಿ ಹಾಗೂ ಟಿ.ಸಿ ಹುಂಡಿ ಗ್ರಾಮದ ಸುಮಾರು 70 ಎಕರೆಗೂ ಹೆಚ್ಚು ಜಮೀನುಗಳು ನಾಲಾ ನೀರು ನುಗ್ಗಿ ಜಲಾವೃತವಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದಲೂ ಸತತ ಸುರಿದ ಮಳೆ ನೀರು ಹಾಗೂ ಗುಂಡಾಲ್ ಜಲಾಶಯದ ನೀರು ಕಾಲುವೆಯ ಮೂಲಕ ಜಮೀನುಗಳಿಗೆ ನೀರು ನುಗ್ಗಿದೆ. ಪ್ರತಿ ವರ್ಷ ಮಳೆ ಬರುತ್ತದೆ ಹಾಗೂ ಗುಂಡಾಲ್ ಜಲಾಶಯದ ನೀರನ್ನು ಕೆರೆಗೆ ಬಿಡುತ್ತಾರೆ ಅದು ಸಹಜ. ಆದರೆ ಯಾವ ವರ್ಷವೂ ಜಮೀನುಗಳಿಗೆ ನೀರು ನುಗ್ಗಿರಲಿಲ್ಲ. ಸುಮಾರು 70 ಎಕರೆಗೂ ಹೆಚ್ಚು ಜಮೀನುಗಳಿಗೆ ನೀರು ನುಗ್ಗಿದೆ. ಈಗಾಗಲೇ ಎಲ್ಲ ಜಮೀನುಗಳಿಗೂ ಭತ್ತದ ನಾಟಿ ಪೈರು ಮಾಡಲಾಗಿತ್ತು. ಈಗ ನಾಟಿ ಪೈರು ಸಂಪೂರ್ಣ ಹಾಳಾಗಿದೆ ಎಂದು ರೈತರು ದೂರಿದ್ದಾರೆ.
ಇದಕ್ಕೆ ಕಾರಣ ಕಬಿನಿ ಇಲಾಖೆಯ ಅಧಿಕಾರಿಗಳು ನಾಲೆಯನ್ನು ಸ್ವಚ್ಛಗೊಳಿಸದಿರುವುದು ಹಾಗೂ ಕೆರೆಗಳ ಹೂಳು ತೆಗೆಸದಿರುವುದು. ಇದರಿಂದಾಗಿ, ನಾಲೆಯ ಮೂಲಕ ನೀರು ನೇರವಾಗಿ ಜಮೀನುಗಳಿಗೆ ನುಗ್ಗಿ ಈ ಅವಾಂತರ ಸೃಷ್ಟಿಯಾಗಿದೆ. ವ್ಯವಸಾಯವನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಇದೇ ನಮಗೆ ಆಧಾರ. ಈಗ ಪೈರು ಸಂಪೂರ್ಣ ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
‘ಕಬಿನಿ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ದೂರವಾಣಿಯ ಮೂಲಕ ಕರೆ ಮಾಡಿ ಮಾಹಿತಿ ನೀಡಿದರು ಸಹ ಯಾರೂ ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಕೆಲ ನಾಲೆಗಳನ್ನು ಸ್ವಚ್ಛಪಡಿಸಿ ಕಿಲೋಮೀಟರ್ಗಟ್ಟಲೆ ಸ್ವಚ್ಛ ಮಾಡಿರುವುದಾಗಿ ಬಿಲ್ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರೈತರಾದ ಮಹಮ್ಮದ್ ಮುಯಿನ್, ಸೋಮಣ್ಣ, ಮಹದೇವಯ್ಯ, ಪುಟ್ಟಸ್ವಾಮಿ, ರಾಜೇಶ್, ಶಿವು ಮಲ್ಲಯ್ಯ ಸೇರಿದಂತೆ ಅನೇಕ ರೈತರು ಆಗ್ರಹಿಸಿದರು.
‘ನಾಲೆಗಳನ್ನು ಸರಿಯಾಗಿ ಸ್ವಚ್ಛ ಮಾಡಿದ್ದರೆ ಈ ಗತಿ ಆಗುತ್ತಿರಲಿಲ್ಲ. ಇನ್ನಾದರೂ ಈ ಬಗ್ಗೆ ಗಮನ ಹರಿಸಿ ರೈತರ ಬಗ್ಗೆ ಕಾಳಜಿ ವಹಿಸಿ. ಇಲ್ಲವಾದರೆ ನಮಗೆ ಸಾವೇ ಗತಿ’ ಎಂದು ರೈತರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.