ADVERTISEMENT

ಚಾಮರಾಜನಗರ: ಕೋವಿಡ್‌ನಿಂದ ಒಂದು ಸಾವು, 39 ಪ್ರಕರಣ ದೃಢ

ಮೃತಪಟ್ಟವರ ಸಂಖ್ಯೆ 50ಕ್ಕೆ 2,500 ದಾಟಿದ ಪ್ರಕರಣಗಳು, 2000ದ ಸಮೀಪ ಗುಣಮುಖರ ಸಂಖ್ಯೆ,

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:15 IST
Last Updated 3 ಸೆಪ್ಟೆಂಬರ್ 2020, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೊರೊನಾ ವೈರಸ್‌ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ಗುರುವಾರದ ವರದಿಯಲ್ಲಿ ಈ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಇದರೊಂದಿಗೆ ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 50ಕ್ಕೆ ತಲುಪಿದೆ.

ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಅವರು ಸಾವೀಗೀಡಾಗಿದ್ದಾರೆ. ನಂತರ ಪರೀಕ್ಷೆ ನಡೆಸುವಾಗ ಸೋಂಕು ದೃಢಪಟ್ಟಿರುವುದು ಗೊತ್ತಾಗಿದೆ. ಕೊಳ್ಳೇಗಾಲದ 67 ವರ್ಷದ ವೃದ್ಧ (ರೋಗಿ ಸಂಖ್ಯೆ 3,71,188) ಅವರನ್ನು ಬುಧವಾರ ಕೊಳ್ಳೇಗಾಲದಿಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ನಿಧನರಾಗಿದ್ದಾರೆ. ಇವರನ್ನು ಕೋವಿಡ್‌ಯೇತರ ಕಾರದಿಂದ ಮೃತಪಟ್ಟವರ ಪಟ್ಟಿಗೆ ಸೇರಿಸಲಾಗಿದೆ.

ಇದುವರೆಗೆ 32 ಮಂದಿ ಕೋವಿಡ್‌ನಿಂದ ಮೃತಪ‍ಟ್ಟಿದ್ದರೆ, 18 ಮಂದಿ ಬೇರೆ ಅನಾರೋಗ್ಯದಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ.

ADVERTISEMENT

ಬುಧವಾರ 39 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ (85) ಗಣನೀಯ ಇಳಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 2,530ಕ್ಕೆ ಏರಿದೆ. 76 ಮಂದಿ ಗುಣಮುಖರಾಗಿದ್ದು, ಈವರೆಗೆ 1,983 ಮಂದಿ ಸೋಂಕು ಮುಕ್ತರಾಗಿದ್ದಾರೆ. 497 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 108 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ 720 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆರ್‌ಟಿಪಿಸಿಆರ್‌ 404, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 306 ಹಾಗೂ ಟ್ರುನಾಟ್‌ ವಿಧಾನದಲ್ಲಿ 10 ಪರೀಕ್ಷೆಗಳನ್ನು ನಡೆಸಲಾಗಿದೆ. 681 ಮಂದಿಯ ವರದಿಗಳು ನೆಗೆಟಿವ್‌ ಬಂದಿವೆ.

ಕೋವಿಡ್‌ ಹಾವಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ 42,468 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, 39,949 ವ‌ರದಿಗಳು ನೆಗೆಟಿವ್‌ ಬಂದಿವೆ.

ಬುಧವಾರ ದೃಢಪಟ್ಟ 39 ಪ್ರಕರಣಗಳಲ್ಲಿ ಕೊಳ್ಳೇಗಾಲ ತಾಲ್ಲೂಕಿನ 13, ಚಾಮರಾಜನಗರದ 12, ಗುಂಡ್ಲುಪೇಟೆಯ ಎಂಟು, ಯಳಂದೂರಿನ ನಾಲ್ಕು, ಹನೂರು ತಾಲ್ಲೂಕು ಹಾಗೂ ಹೊರ ಜಿಲ್ಲೆಯ ಒಂದು ಪ್ರಕರಣ ಸೇರಿವೆ.

ಗುಣಮುಖರಾದ 76 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 41, ಗುಂಡ್ಲುಪೇಟೆ ತಾಲ್ಲೂಕಿನ 14, ಕೊಳ್ಳೇಗಾಲದ 11, ಹನೂರಿನ ಎಂಟು, ಯಳಂದೂರು ತಾಲ್ಲೂಕಿನ ಇಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.