ADVERTISEMENT

ಅಭಿವೃದ್ದಿಗೆ ಧ್ರುವನಾರಾಯಣ ಕೊಡುಗೆ ಅಪಾರ: ಬೋಧಿದತ್ತ ಬಂತೇಜಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 6:38 IST
Last Updated 1 ಆಗಸ್ಟ್ 2023, 6:38 IST
ಚಾಮರಾಜನಗರದಲ್ಲಿ ಆರ್‌.ಧ್ರುವನಾರಾಯಣ ಅವರ 62 ನೇ ಜನ್ಮದಿನದ ಅಂಗವಾಗಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಬೋಧಿದತ್ತ ಬಂತೇಜಿ ಅವರು ಸ್ವಯಂ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಕಾಂಗ್ರೆಸ್‌ ಮುಖಂಡರು, ಅಭಿಮಾನಿ ಬಳಗದವರು ಇದ್ದರು
ಚಾಮರಾಜನಗರದಲ್ಲಿ ಆರ್‌.ಧ್ರುವನಾರಾಯಣ ಅವರ 62 ನೇ ಜನ್ಮದಿನದ ಅಂಗವಾಗಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಬೋಧಿದತ್ತ ಬಂತೇಜಿ ಅವರು ಸ್ವಯಂ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಕಾಂಗ್ರೆಸ್‌ ಮುಖಂಡರು, ಅಭಿಮಾನಿ ಬಳಗದವರು ಇದ್ದರು   

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್‌.ಧ್ರುವನಾರಾಯಣ ಅವರ 62ನೇ ಜನ್ಮದಿನವನ್ನು ಅವರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್‌ ಮುಖಂಡರು ಜಿಲ್ಲೆಯಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಸೋಮವಾರ ಆಚರಿಸಿದರು. 

ಚಾಮರಾಜನಗರದಲ್ಲಿ ಅಭಿಮಾನಿ ಬಳಗವು ರೋಟರಿ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು. 

ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಶಿಬಿರದಲ್ಲಿ 45 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. 350ಕ್ಕೂ ಹೆಚ್ಚು ಮಂದಿ ತಜ್ಞ ವೈದ್ಯರಿಂದ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 80 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ಬಸ್‌ಗಳಲ್ಲಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

ADVERTISEMENT

ಸ್ವತಃ ರಕ್ತದಾನ ಮಾಡಿ ಶಿಬಿರಗಳಿಗೆ ಚಾಲನೆ ನೀಡಿ, ಮಾತನಾಡಿದ ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಬಂತೇಜಿ, ‘ಧ್ರುವನಾರಾಯಣ ಅವರು ಜಿಲ್ಲೆಯ ಅಭಿವೃದ್ದಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಬಣ್ಣಿಸಿದರು. 

‘ಧ್ರುವನಾರಾಯಣ ಹಾಗೂ ಅವರು ಮಾಡಿರುವ ಜನಪರ ಕೆಲಸಗಳು ಜಿಲ್ಲೆ, ಇಡೀ ಕರ್ನಾಟಕದಲ್ಲಿ ಜನಜನಿತವಾಗಿದೆ. ಅವರು ಜನಾನುರಾಗಿ ಸಹೃದಯವಂತರಾಗಿ ಬಡವರ ಪರ ಯಾವಾಗಲೂ ಸ್ಪಂದಿಸುತ್ತಿದ್ದರು. ಅವರ ಜನಪರ ಕಾರ್ಯಗಳನ್ನು‌ ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಹೇಳಿದರು. 

'ಅಭಿಮಾನಿ ಬಳಗವು ಅವರ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಗಳೊಂದಿಗೆ ಆಚರಣೆ ಮಾಡುತ್ತಿರುವುದು ಬಹಳ ಅರ್ಥಪೂರ್ಣ’ ಎಂದರು. 

ಆಂಧ್ರಪ್ರದೇಶ ಗೌತಮಿ ಬುದ್ದ ವಿಹಾರದ ಬಂತೇ ಸಿದ್ದಾರ್ಥ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಶಾಸಕ ಎ.ಆರ್.ಕೃಷ್ಣಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಎ.ಸಿದ್ದರಾಜು,  ಜಿ.ಎನ್.ನಂಜುಂಡಸ್ವಾಮಿ, ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್,  ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು, ಪ್ರಧಾನ ಕಾರ್ಯದರ್ಶಿ ಎಲ್‌ಐಸಿ  ಹೊಮ್ಮ ನಾಯಕ, ವಕೀಲ ಅರುಣ್ ಕುಮಾರ್, ಕೆ.ಪಿ.ಸದಾಶಿವಮೂರ್ತಿ ಇತರರು ಇದ್ದರು. 

ಶಿಬಿರದಲ್ಲಿ ಕಣ್ಣು ತಪಾಸಣೆಗಾಗಿ ಸೇರಿದ್ದ ಸಾರ್ವಜನಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.