ADVERTISEMENT

ಹರದನಹಳ್ಳಿ: 350 ಮಂದಿಗೆ ಕಣ್ಣಿನ ತಪಾಸಣೆ

ಡಾ. ಬಾಬು ಚಾರಿಟಬಲ್ ಟ್ರಸ್ಟ್ ವತಿಯಿಂದ ಕಣ್ಣಿನ ಉಚಿತ ಕಣ್ಣಿನ ತಪಾಸಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 15:51 IST
Last Updated 27 ನವೆಂಬರ್ 2022, 15:51 IST
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಭಾನುವಾರ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವೈದ್ಯರು ಮಹಿಳೆಯ ಕಣ್ಣಿನ ತಪಾಸಣೆ ಮಾಡಿದರು. ಚಾಮುಲ್‌ ನಿರ್ದೇಶಕ ಎಚ್‌.ಎಸ್‌.ಬಸವರಾಜು,  ಡಾ.ಎ.ಆರ್‌.ಬಾಬು, ನಾಗಶ್ರೀ ಪ್ರತಾಪ್‌ ಇತರರು ಇದ್ದರು
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಭಾನುವಾರ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವೈದ್ಯರು ಮಹಿಳೆಯ ಕಣ್ಣಿನ ತಪಾಸಣೆ ಮಾಡಿದರು. ಚಾಮುಲ್‌ ನಿರ್ದೇಶಕ ಎಚ್‌.ಎಸ್‌.ಬಸವರಾಜು,  ಡಾ.ಎ.ಆರ್‌.ಬಾಬು, ನಾಗಶ್ರೀ ಪ್ರತಾಪ್‌ ಇತರರು ಇದ್ದರು   

ಚಾಮರಾಜನಗರ: ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ, ನಗರದ ಡಾ.ಬಾಬು ಸೋಷಿಯಲ್ ವೆಲ್‌ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರತಾಲ್ಲೂಕಿನ ಹರದನಹಳ್ಳಿಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಶಿಬಿರದಲ್ಲಿ 350 ಮಂದಿ ಭಾಗವಹಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಈ ಪೈಕಿ ಕಣ್ಣಿನ ಪೊರೆಯುಳ್ಳ 48 ಮಂದಿಯನ್ನು ಮೈಸೂರಿನ ಜೆಎಸ್‌ಎಸ್ ಅಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯಲಾಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ‘ಕಣ್ಣು ಅತ್ಯಂತ ಉಪಯುಕ್ತವಾದ ಅಂಗ, ಕಾಲು, ಕೈ ಊನವಾದರೂ ಹೇಗೋ ಜೀವನ ಸಾಗಿಬಹುದು. ಆದರೆ ಕಣ್ಣಿನ ದೃಷ್ಠಿ ಕಳೆದುಕೊಂಡರೆ ಜೀವನ ನಶ್ವರ. ಹೀಗಾಗಿ ಡಾ. ಬಾಬು ಅವರು ಹಳ್ಳಿಹಳ್ಳಿಗಳಲ್ಲೂ ಕಣ್ಣಿನ. ತಪಾಸಣಾ ಶಿಬಿರ ಆಯೋಜಿಸಿ ಬಹಳಷ್ಟು ಬಡವರಿಗೆ ಕಣ್ಣಿನ ದೃಷ್ಟಿ ಕೊಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ನಾಗಶ್ರೀ ಪ್ರತಾಪ್ ಮಾತನಾಡಿ, ‘ಡಾ.ಎ.ಆರ್.ಬಾಬುವೈದ್ಯರಾಗಿ ಸೇವೆ ಸಲ್ಲಿಸುವ ಜೊತೆಗೆ ಸಮಾಜದ ಆರೋಗ್ಯ ರಕ್ಷಣೆಯಲ್ಲಿಯು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 30 ವರ್ಷಗಳಿಂದ ವೈದ್ಯರಾಗಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಈಗ ಬಾಬು ಅವರು ಸೇವಾ ಟ್ರಸ್ಟ್ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ ಈ ಭಾಗದಲ್ಲಿ ಜನಾನುರಾಗಿಯಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೂ ಉಚಿತವಾಗಿ ನೋಟ್ ಬುಕ್‌ಗಳನ್ನು ನೀಡುತ್ತಿರುವುದು ಅವರ ಸೇವಾ ಕಾಳಜಿಯನ್ನು ತೋರಿಸುತ್ತಿದೆ’ ಎಂದರು.

ಟ್ರಸ್ಟ್‌ ಅಧ್ಯಕ್ಷ ಡಾ.ಎ.ಆರ್.ಬಾಬು ಮಾತನಾಡಿ, ‘ತಾಲ್ಲೂಕಿನಾದ್ಯಂತ ಕಣ್ಣಿನ ತಪಾಸಣೆ ಶಿಬಿರ ಅಯೋಜಿಸುವ ಮೂಲಕ ಜನಸೇವೆ ಮಾಡಬೇಕೆಂಬ ಆಶಯ ಹೊಂದಿದ್ದೆ. ತಾಲ್ಲೂಕಿನ ಚಂದಕವಾಡಿ, ಮಾದಾಪುರ, ಉಡಿಗಾಲ ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು ಯಶಸ್ವಿಯಾಗಿದೆ. ಹರದನಹಳ್ಳಿ, ಅಮಚವಾಡಿ ಹಾಗೂ ಸುತ್ತಮುತ್ತ ಗ್ರಾಮಗಳ ಜನರ ಅನುಕೂಲಕ್ಕಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯದ ಅರಿವು ಮೂಡಿಸುವುದು ಟ್ರಸ್ಟ್‌ ಉದ್ದೇಶ’ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ, ಸಹಕಾರ ಯೂನಿಯನ್ ನಿರ್ದೇಶಕ ಹರದನಹಳ್ಳಿ ಸುಂದರಪ್ಪ,ಮುಖಂಡರಾದ ಚನ್ನಂಜಪ್ಪ, ಸೋಮಣ್ಣ, ಪ್ರಕಾಶಶೆಟ್ಟಿ, ಚಂದ್ರು, ಗುರುನಾಯಕ್ ಚಂದ್ರಶೇಖರ್, ಎಂ.ಎಸ್.ಮಹದೇವಸ್ವಾಮಿ, ಬೆಳ್ಳಪ್ಪ ಕಿಲಗೆರೆ, ಬಂಗಾರಸ್ವಾಮಿ ಕೆಂಪನಾಯಕ , ಎಚ್.ಆರ್.ಸ್ವಾಮಿ, ಪುಟ್ಟಸ್ವಾಮಿಪ್ಪ, ರಂಗಸ್ವಾಮಿಗೌಡ , ಲಿಂಗರಾಜು ಅಮಚವಾಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.