ಚಾಮರಾಜನಗರ: ‘ಜಮೀನಿನ ವಿಚಾರದಲ್ಲಿ ಗ್ರಾಮದ ಯಜಮಾನರು ಬಹಿಷ್ಕಾರ ಹಾಕಿದ್ದು, ಬದುಕಲು ತೊಂದರೆಯಾಗುತ್ತಿದೆ’ ಎಂದು ಕೊಳ್ಳೇಗಾಲದ ಮೋಳೆ ನಿವಾಸಿಗಳಾದ ಪ್ರಭುಸ್ವಾಮಿ ಹಾಗೂ ನಾಗರಾಜಮ್ಮ ಅಳಲು ತೋಡಿಕೊಂಡರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನ್ಯಾಯ ಕೊಡಿಸುವಂತೆ ಮನವಿ ಮಾಡಿದರೆ, ಅನ್ಯಾಯ ಎಸಗಿದ ವ್ಯಕ್ತಿಯ ಪರವಾಗಿ ನಿಂತ ಯಜಮಾನರು ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.
‘ನಮ್ಮ ಕುಟುಂದ ಸದಸ್ಯರನ್ನು ಊರಿನ ಜನ ಮಾತನಾಡಿಸುತ್ತಿಲ್ಲ. ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳನ್ನು ನೀಡುತ್ತಿಲ್ಲ. ಜಮೀನಿಗೆ ಕೆಲಸ ಮಾಡಲು ಕೂಲಿಯವರು ಬರುತ್ತಿಲ್ಲ, ಹಬ್ಬ, ಉತ್ಸವಗಳಲ್ಲಿ ಭಾಗವಹಿಸಲು ಆಹ್ವಾನ ನೀಡುತ್ತಿಲ್ಲ. ಮನನೊಂದ ಮಕ್ಕಳು, ಸೊಸೆಯಂದಿರು ಬೆಂಗಳೂರಿಗೆ ಹೋಗಿ ನೆಲೆಸಿದ್ದಾರೆ. 2014ರಿಂದಲೂ ನಲುಗುತ್ತಿದ್ದೇವೆ’ ಎಂದು ನೋವು ತೋಡಿಕೊಂಡರು.
ಸ್ಪಷ್ಟನೆ: ಸಾಮಾಜಿಕ ಬಹಿಷ್ಕಾರ ಹಾಕಿರುವ ವಿಚಾರ ಗಮನಕ್ಕೆ ಬಂದಿಲ್ಲ, ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.