ADVERTISEMENT

ಚಾಮುಲ್ ಚುನಾವಣೆ: ಐವರಿಂದ ನಾಮಪತ್ರ

ಮಹಿಳಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದ ಪುಟ್ಟರಂಗಶೆಟ್ಟಿ ಮಗಳು ಶೀಲಾ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:42 IST
Last Updated 3 ಜೂನ್ 2022, 4:42 IST
ಚಾಮುಲ್‌ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ ಮಗಳು ಶೀಲಾ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಸೇರಿದಂತೆ ಪಕ್ಷದ ಮುಖಂಡರು ಇದ್ದರು
ಚಾಮುಲ್‌ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ ಮಗಳು ಶೀಲಾ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಸೇರಿದಂತೆ ಪಕ್ಷದ ಮುಖಂಡರು ಇದ್ದರು   

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಇದೇ 14ರಂದು ನಡೆಯಲಿರುವ ಚುನಾವಣೆಗಾಗಿ ಗುರುವಾರ ಐವರು ನಾಮಪತ್ರ ಸಲ್ಲಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕುಲಗಾಣ ಕೆ.ಎಲ್.ರವಿಕುಮಾರ್, ಹನೂರು ತಾಲ್ಲೂಕಿನಿಂದಚಾಮುಲ್ ಮಾಜಿ ಅಧ್ಯಕ್ಷ ಸಿ.ಎಸ್.ಗುರುಮಲ್ಲಪ್ಪ, ಶಾಹಿದ್ ಅಹಮದ್ ಅವರು ಕಾಂಗ್ರೆಸ್ ಬೆಂಬಲಿತರಾಗಿ ಹಾಗೂ ಯಳಂದೂರು ತಾಲ್ಲೂಕಿನಿಂದ ಪಕ್ಷೇತರರಾಗಿ ನಾಗೇಂದ್ರ ಸ್ವಾಮಿ, ಮಹಿಳಾ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮಗಳು ಶೀಲಾ ನಾಮಪತ್ರ ಸಲ್ಲಿಸಿದರು.

ಕೆ.ಎಲ್.ರವಿಕುಮಾರ್ ಅವರು ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ, ಗ್ರಾಮ ಡೇರಿ ಅಧ್ಯಕ್ಷನಾಗಿ ಉತ್ತಮ ಸೇವೆ ಸಲ್ಲಿಸಿರುವ ಅನುಭವಿದ್ದು, ತಾಲ್ಲೂಕಿನ ಎಲ್ಲ ಡೇರಿ ಅಧ್ಯಕ್ಷರು ಹಾಗೂ ಮತದಾರನ್ನು ಭೇಟಿ ಮಾಡಿ, ನನ್ನ ಕಾರ್ಯ ಯೋಜನೆ ಮತ್ತು ಡೇರಿ, ಒಕ್ಕೂಟದ ಅಭಿವೃದ್ದಿ ಕುರಿತು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಮತಗಳನ್ನು ಪಡೆದು ಗೆಲ್ಲುವ ವಿಶ್ವಾಸವಿದೆ’ ಎಂದರು.

ADVERTISEMENT

ಕೆ.ಜಿ. ಸೋಮಶೇಖರ್, ಕಲ್ಪುರ ಬಸವಣ್ಣ, ಬೇಡಪುರ ಕುಮಾರ್, ಅರಳಿಕಟ್ಟೆ ಶಿವಪ್ಪ, ಚನ್ನಬಸಪ್ಪ, ಪ್ರಭುಸ್ವಾಮಿ, ಕೆ.ಎಲ್. ಮಹದೇವಯ್ಯ ಕೆ.ಎಲ್.ಮಧು ಮೊದಲಾದವರು ಇದ್ದರು.

ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ಮಾತನಾಡಿ, ‘ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ 7ನೇ ಬಾರಿ ಸ್ಪರ್ಧೆ ಮಾಡುತ್ತಿದ್ದು, ನಾಲ್ಕು ಬಾರಿ ಗೆಲುವು ಸಾಧಿಸಿ ಉತ್ತಮ ಕೆಲಸ ಮಾಡಿದ್ದೇನೆ. ಮೈಸೂರು ಹಾಲು ಒಕ್ಕೂಟದಲ್ಲಿ ಐದು ವರ್ಷ ಅಧ್ಯಕ್ಷನಾಗಿ, ಚಾಮುಲ್ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ಎರಡೂವರೆ ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ, ಚಾಮುಲ್ ಅಭಿವೃದ್ದಿಪಡಿಸಲು ಶ್ರಮ ವಹಿಸಿದ್ದೇನೆ. ವರಿಷ್ಠರು ಹಾಗೂ ಸಹಕಾರ ಸಂಘದ ಅಧ್ಯಕ್ಷರು ಮತ್ತು ಅಭಿಮಾನಿಗಳ ಬೆಂಬಲದೊಂದಿಗೆ ಮತ್ತೊಮ್ಮೆ ಸ್ಪರ್ಧೆ ಮಾಡಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದರು.

ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಮುಖಂಡರಾದ ಜಾವೇದ್ ಅಹಮದ್, ಚಿಕ್ಕತಮ್ಮಯಪ್ಪ, ಕಿಟ್ಟಪ್ಪ ನಾಯ್ಡು, ಮುರುಳಿ, ರವೀಂದ್ರ, ಶಂಕರ್, ಶಿವಸ್ವಾಮಿ ಇದ್ದರು.

ಶೀಲಾ ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ನನ್ನ ತಂದೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಬಂದವರು. ನಮ್ಮ ಸ್ವಗ್ರಾಮ ಉಪ್ಪಿನಮೋಳೆಯಲ್ಲಿ ಡೇರಿ ಆರಂಭಿಸಿ, ಸಂಘದ ಅಧ್ಯಕ್ಷೆಯಾಗಿ ಅನುಭವ ಪಡೆದುಕೊಂಡಿದ್ದೇನೆ. ಒಕ್ಕೂಟದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಜಿಲ್ಲೆಯ ರೈತರು ಹಾಗೂ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ನೆರವಾಗಬೇಕು. ಮಹಿಳಾ ಡೇರಿಗಳಿಗೆ ಹೆಚ್ಚಿನ ಅನುದಾನ ಮತ್ತು ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಸ್ಪರ್ಧೆ ಮಾಡಿದ್ದೇನೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷರಾದ ಎಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಮುಖಂಡರಾದ ತೋಟೇಶ್, ಮುಖಂಡರಾದ ಕಾವೇರಿ ಶಿವಕುಮಾರ್, ಜಯಲಕ್ಷ್ಮಿ, ಚಂದುಕಟ್ಟೆಮೋಳೆ ಕಮಲಮ್ಮ ಇತರರು ಇದ್ದರು.

ಎಂಟು ನಾಮಪತ್ರ ಸಲ್ಲಿಕೆ
‘ಚಾಮುಲ್‌ ಚುನಾವಣೆಗಾಗಿ ಇದುವರೆಗೆ ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ. ಮೊದಲ ದಿನ ಮೂರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು’ ಎಂದು ಚುನಾವಣಾಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ಮಾಹಿತಿ ನೀಡಿದ್ದಾರೆ.

ಇದೇ 6 ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 7ರಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಸ್‌ಗೆ 8 ಕೊನೆಯ ದಿನ. 14ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.