
ಹನೂರು: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಬೀದಿ ನಾಟಕಗಳ ಮೂಲಕ ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಿತು.
ಮಲೆ ಮಹದೇಶ್ವರ ವನ್ಯಧಾಮದ ಕಾಡಂಚಿನ ಗ್ರಾಮಗಳಾದ ಕೊಪ್ಪ, ಸತ್ಯಮಂಗಲ, ದಿನ್ನಳ್ಳಿ, ಲೊಕ್ಕನಹಳ್ಳಿ, ಪಿ ಜಿ ಪಾಳ್ಯ, ಹುತ್ತೂರು, ಒಡೆಯರಪಾಳ್ಯ, ಬಿ.ಜಿ ದೊಡ್ಡಿ, ಅಂಡೆ ಕುರುಬನದೊಡ್ಡಿ ಮತ್ತು ಹೊಸಪಾಳ್ಯ ಗ್ರಾಮಗಳಲ್ಲಿ ಎರಡು ದಿನಗಳಿಂದ ಸ್ವಯಂ ಸೇವಕರ ತಂಡ ಕಾಡ್ಗಿಚ್ಚು, ಮಾನವ ವನ್ಯಜೀವಿ ಸಂಘರ್ಷ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸ್ಥಳೀಯರ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸುವ ನಾಟಕಗಳನ್ನು ಪ್ರದರ್ಶಿಸಿದರು.
ಪಿ.ಜಿ ಪಾಳ್ಯ ವನ್ಯಜೀವಿ ವಲಯ ಅರಣ್ಯಾಧಿಕಾರಿ ಪುಟ್ಟರಾಜು ಮಾತನಾಡಿ, ಮನುಷ್ಯನ ಪ್ರಗತಿಗೆ ಬೆನ್ನುಲುಬಾಗಿರುವ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ರಕ್ಷಣೆ ಮಾಡಬೇಕಿರುವುದು ಸಮಾಜದ ಕರ್ತವ್ಯ. ಸಂವಿಧಾನದ ಆಶಯ ಹಾಗೂ ಮೂಲಭೂತ ಕರ್ತವ್ಯಗಳಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯೂ ಒಂದಾಗಿದ್ದು ಸಮಾಜ ಕೈಜೋಡಿಸಬೇಕು ಎಂದರು.
ಪ್ರಾಣಿಗಳು ಜಮೀನು ಹಾಗೂ ಗ್ರಾಮಗಳ ಬಳಿ ಬಂದಾಗ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು. ಅರಣ್ಯದೊಳಗೆ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡುವ ಮೂಲಕ ಅರಣ್ಯ ಸಂರಕ್ಷಣೆಗೆ ಸಹಕರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.