
ಚಾಮರಾಜನಗರ: ‘ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಗೊಳಪಡುವ ಪಾರಂಪರಿಕ ಮಹತ್ವ ಹೊಂದಿರುವ ದೊಡ್ಡ ಸಂಪಿಗೆಯ ವನದಲ್ಲಿ ಸೋಮವಾರ ರಾತ್ರಿ ಸಾಂಪ್ರದಾಯಿಕ ಶಿವರಾತ್ರಿ ಆಚರಣೆಯ ಹೆಸರಿನಲ್ಲಿ ಅರಣ್ಯ ಕಾನೂನು ಹಾಗೂ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಟ್ಟ ಅಭಯಾರಣ್ಯದ ನಡುವಿನಲ್ಲಿ ಭಾರ್ಗವಿ ನದಿಯ ತಟದಲ್ಲಿರುವ ಸಂಪಿಗೆ ವೃಕ್ಷಕ್ಕೆ ಅನಾದಿಕಾಲದಿಂದಲೂ ಸ್ಥಳೀಯ ನಿವಾಸಿಗಳಾದ ಆದಿವಾಸಿಗಳು ಶಿವರಾತ್ರಿಯ ದಿನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಸಂಪಿಗೆ ಮರಕ್ಕೆ ಕೋಲೆ, ಮುತ್ತುಗ, ಜಾಲ ಪುಷ್ಪ ಮತ್ತು ಬಿಲ್ವಪತ್ರೆಗಳಿಂದ ಅಲಂಕರಿಸಿ ಧೂಪ, ಆರತಿ ಬೆಳಗಲಾಗುತ್ತದೆ. ವೃಕ್ಷಕ್ಕೆ ಹೊಸ ವಸ್ತ್ರ ತೊಡಿಸಿ, ಹೂ, ಚೆಂಡು ಹಾರಗಳಿಂದ ಸಿಂಗರಿಸಿ, ತ್ರಿಶೂಲ ಪೂಜೆ ನೆರವೇರಿಸಿ ಕಾಡಿನ ಜನರನ್ನು ರಕ್ಷಿಸುವಂತೆ ಶಿವನಲ್ಲಿ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ.
ರಾತ್ರಿ ಪೂರ ನಡೆಯುವ ನಾಲ್ಕು ಜಾವದ ಪೂಜೆಯಲ್ಲಿ ನಿಸರ್ಗದ ಗಾಢ ಸಂಬಂಧವನ್ನು ಬೆಸೆಯುವ 'ಗೋರುಕನ ನೃತ್ಯ, ಓಲಗ, ಹಾಡುಗಳು ಹಾಗೂ ಸಾಂಪ್ರದಾಯಿಕ ಸೋಲಿಗರ ನೃತ್ಯ ಪ್ರದರ್ಶಿಸಲಾಗುತ್ತದೆ.
ಆದರೆ, ಈಚೆಗೆ ಸಂಪ್ರದಾಯಬದ್ಧ ನೃತ್ಯ, ಕುಣಿತ, ಆಚರಣೆಗಳ ಬದಲಾಗಿ ಡಿಜೆ ಅಬ್ಬರ ಹೆಚ್ಚಾಗಿದೆ. ಶತಮಾನಗಳಷ್ಟು ಹಳೆಯದಾದ ಬೃಹತ್ ಸಂಪಿಗೆ ಮರಕ್ಕೆ ಅಪಾಯಕಾರಿಯಾಗಿ ವಿದ್ಯುತ್ ದೀಪಾಲಂಕರ ಮಾಡಲಾಗುತ್ತಿದೆ. ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಸಂಪಿಗೆ ಮರ ನಾಶವಾಗಲಿದೆ. ಆಚರಣೆಯ ನೆಪದಲ್ಲಿ ಸೋಲಿಗರಲ್ಲದ ನೆರೆಹೊರೆಯ ಪ್ರದೇಶಗಳಿಂದ ಜನರು ಹಾಗೂ ನಗರಗಳಿಂದ ಪ್ರವಾಸಿಗರು ಸಂಪಿಗೆ ಮರದ ಬಳಿ ಮೋಜು ಮಸ್ತಿ ಮಾಡುವುದು ಹೆಚ್ಚಾಗಿದೆ.
‘ಹುಲಿ ಸಂರಕ್ಷಿತ ಪ್ರದೇಶದೊಳಗೆ ಅಬ್ಬರದ ಸಂಗೀತ ಹಾಕುವ ಮೂಲಕ ಪ್ರಾಣಿ ಪಕ್ಷಿಗಳ ಆವಾಸಕ್ಕೆ ತೊಂದರೆಯಾಗುತ್ತಿದೆ. ಶಬ್ಧಮಾಲಿನ್ಯದಿಂದ ಕಾಡಿನ ನೀರವತೆಗೆ ಭಂಗ ಉಂಟಾಗುತ್ತಿದೆ. ರಾತ್ರಿಯ ಹೊತ್ತು ಎಗ್ಗಿಲ್ಲದೆ ಜನ ಹಾಗೂ ವಾಹನಗಳ ಸಂಚಾರದಿಂದ ಕಾಡು ಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆಯಾಗುತ್ತಿದೆ’ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಮೋಜು ಮಸ್ತಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು, ಕೋರ್ ವಲಯದಲ್ಲಿ ನಿಯಮಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.