ಚಾಮರಾಜನಗರ:ಅದ್ಧೂರಿ ಗಣೇಶೋತ್ಸವಕ್ಕೆ ಹೆಸರಾದ ಚಾಮರಾಜನಗರದ ಶ್ರೀ ವಿದ್ಯಾಗಣಪತಿ ಮಂಡಳಿ ಕೂಡ ಈ ವರ್ಷ ಸರಳವಾಗಿ ಗಣೇಶೋತ್ಸವ ಆಯೋಜಿಸಿದ್ದು, ಎರಡೂವರೆ ಅಡಿಯ ಗಣಪತಿ ವಿಗ್ರಹವನ್ನು ಪ್ರತಿಷ್ಠಾನೆ ಮಾಡಿದೆ. ಈ ಬಾರಿಯದ್ದು, 58ನೇ ವರ್ಷದ ಗಣೇಶೋತ್ಸವ.
ಮಂಡಳಿಯು ಪ್ರತಿ ವರ್ಷ 30 ದಿನಗಳಿಗಿಂತಲೂ ಹೆಚ್ಚು ಕಾಲ ಗಣೇಶನನ್ನು ಪೂಜಿಸಿ, ನಂತರ ವಿಸರ್ಜನೆ ಮಾಡುತ್ತಿತ್ತು. ದಿನಪೂರ್ತಿ ನಡೆಯುತ್ತಿದ್ದ ವಿಸರ್ಜನೆ ಮೆರವಣಿಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಗಣೇಶೋತ್ಸವವನ್ನು ಮೂರು ದಿನಕ್ಕೆ ಮಿತಿಗೊಳಿಸಿದೆ.
ಶನಿವಾರ ಬೆಳಿಗ್ಗೆ 11.30ಕ್ಕೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮಂಗಳವಾರ ಲೋಕಕಲ್ಯಾಣಾರ್ಥವಾಗಿ ಗಣಪತಿ ಹವನ ನೆರವೇರಿತು. ಸೋಮವಾರ ಸಂಜೆ ಸೂರ್ಯಾಸ್ತದ ನಂತರ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
‘ಸರ್ಕಾರದ ಮಾರ್ಗಸೂಚಿಗೆ ಅನುಸಾರವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಮೂರು ದಿನ ಮಾತ್ರ ಪೂಜಿಸುತ್ತಿದ್ದೇವೆ. ಸೋಮವಾರ ಸಂಜೆ ವಿಗ್ರಹ ವಿಸರ್ಜನೆ ನಡೆಯಲಿದೆ. ಪ್ರತಿಷ್ಠಾಪನೆ ಮಾಡಿದ ಸ್ಥಳದ ಸಮೀಪವೇ ಡ್ರಮ್ಗೆ ನೀರು ತುಂಬಿಸಿ, ಅದರಲ್ಲಿ ವಿಸರ್ಜನೆ ಮಾಡುತ್ತೇವೆ’ ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.