ADVERTISEMENT

ಯಳಂದೂರು | ಬೆಳ್ಳುಳ್ಳಿ ಬೆಲೆ ಕುಸಿತ: ಬೆಳೆಗಾರರಿಗೆ ಸಂಕಷ್ಟ

ಯಳಂದೂರು: ತಳಮಟ್ಟ ಮುಟ್ಟಿದ ಧಾರಣೆ, ಬಿಕರಿಯಾಗದ ಮಾಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 6:10 IST
Last Updated 17 ಮಾರ್ಚ್ 2025, 6:10 IST
ಬೆಳ್ಳುಳ್ಳಿ ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆಯರು
ಬೆಳ್ಳುಳ್ಳಿ ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆಯರು   

ಯಳಂದೂರು: ಬೆಳ್ಳುಳ್ಳಿ ಬಿತ್ತನೆ ಮಾಡುವಾಗ ಖುಷಿಯಾಗಿದ್ದ ಕೃಷಿಕರು, ಬೆಳ್ಳುಳ್ಳಿಗೆ ಧಾರಣೆ ದಿಢೀರ್ ಕುಸಿದ ಕಾರಣ ಬೆಳೆ ಕೊಯ್ಲಿಗೆ ಬಂದಾಗ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಬೆಳೆ ತೆಗೆಯಲು ಮಾಡಿದ ಖರ್ಚು ಕೈಸೇರದೆ, ಸಾಲದ ಸುಳಿಗೆ ಸಿಲುಕುವಂತಾಗಿದೆ. ತಾಲ್ಲೂಕಿನ ಬೇಸಾಯಗಾರರು ಬೆಳ್ಳುಳ್ಳಿ ಧಾರಣೆ ಗಗನ ಮುಟ್ಟಿದ ನಂತರ ನಾಟಿಗೆ ಮುಂದಾಗಿದ್ದರು. ಈರುಳ್ಳಿ ತಾಕಿನ ಜೊತೆಗೆ ಬೆಳ್ಳುಳ್ಳಿ ಬೆಳೆಯುವತ್ತಲೂ ಆದ್ಯತೆ ನೀಡಿದ್ದಾರೆ. ಹಲವು ತಿಂಗಳಿಂದ ಸಾರ್ವಕಾಲಿಕ ಏರಿಕೆ ಕಂಡಿದ್ದ ಬೆಳ್ಳುಳ್ಳಿ, ಸಾಮಾನ್ಯ ರೈತರನ್ನು ಆಕರ್ಷಿಸಿತ್ತು. ತುಂಡು ಹಿಡುವಳಿಗಳಲ್ಲಿ ಹೆಚ್ಚಿನ ಖರ್ಚು ಮಾಡಿ ಬೀಜ ಬಿತ್ತನೆ ಮಾಡಿದ್ದರು. ಅಲ್ಪಾವಧಿ ಬೆಳೆ ಬೆಳ್ಳುಳ್ಳಿ ಈಗ ಕಟಾವಿಗೆ ಬಂದಿದ್ದು, ಉತ್ತಮ ಇಳುವರಿ ತಂದಿದೆ.

ಡಿಸೆಂಬರ್ ಮಧ್ಯಂತರದಲ್ಲಿ ನಾಟಿ ಮಾಡಿದ್ದ ಬೆಳೆ ಕೊಯ್ಲಿಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೇಡಿಕೆ ಕುಸಿದಿದೆ. ಬೆಲೆಯೂ ಕನಿಷ್ಠ ಮಟ್ಟಕ್ಕೆ ಮುಟ್ಟಿದೆ. ಇದರಿಂದ ಹೊರ ರಾಜ್ಯಗಳಿಗೆ ರಫ್ತಾಗುತ್ತಿದ್ದ ಬೆಳ್ಳುಳ್ಳಿ ಈಗ ಸ್ಥಳೀಯ ಮಾರುಕಟ್ಟೆಗೆ ಪೂರೈಸಬೇಕಾಗಿದ್ದು, ಬೆಳೆಗಾರರಲ್ಲಿ ಆತಂಕ ತಂದಿದೆ ಎನ್ನುತ್ತಾರೆ ರೈತರು.

ADVERTISEMENT

‘ಸೇಲಂ ಮಾರುಕಟ್ಟೆಯ ಗುಣಮಟ್ಟದ ಬಿತ್ತನೆ ತಳಿಯನ್ನು ಒಂದು ಕ್ವಿಂಟಲ್‌‌‌ಗೆ ₹50 ಸಾವಿರ ನೀಡಿ ಖರೀದಿಸಿ ನಾಟಿ ಮಾಡಿದ್ದೆವು. ನಿರ್ವಹಣೆ ವೆಚ್ಚ ₹50 ಸಾವಿರ ದಾಟಿತ್ತು. ಒಟ್ಟಾರೆ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆ ತೆಗೆದಿದ್ದೇವೆ. ನಾಟಿ ಸಂದರ್ಭದಲ್ಲಿ 1 ಕ್ವಿಂಟಲ್‌‌‌ಗೆ ₹25 ಸಾವಿರ ಇದ್ದ ಬೆಲೆ ಕೊಯ್ಲಿನ ಸಂದರ್ಭ 1 ಕ್ವಿಂಟಲ್ ₹4 ರಿಂದ ₹5 ಸಾವಿರ ಮುಟ್ಟಿದೆ. ಬೆಲೆ ಕುಸಿತದಿಂದ ಬೆಳೆಗೆ ಮಾಡಿದ ಖರ್ಚಿನ ಅರ್ಧ ಭಾಗವೂ ಕೈಸೇರದಂತಾಗಿದೆ. ಸಗಟು ಮಾರಾಟಗಾರರು ತಿರುಗಿಯೂ ನೋಡಿಲ್ಲ’ ಎಂದು ಕಟ್ಟೆ ಗಣಿಗನೂರು ಕೃಷಿಕ ರಂಗಸ್ವಾಮಿ ಕಣ್ಣೀರು ಹಾಕಿದರು.

ಅರ್ಧ ಎಕರೆಯಲ್ಲಿ ನಾಟಿ ಮಾಡಲು 1 ಕ್ವಿಂಟಲ್ ಬಿತ್ತನೆ ಬೆಳ್ಳುಳ್ಳಿ ಬೇಕು. ಸಾಗಣೆ ವೆಚ್ಚ, ನಾಟಿ, ಗೊಬ್ಬರ ಹಾಗೂ ಔಷಧಿ ಖರ್ಚು ಮತ್ತು ಕೊಯ್ಲೋತ್ತರ ವೆಚ್ಚವನ್ನು ಪರಿಗಣಿಸಿದರೆ ಲುಕ್ಸಾನು ಹೆಚ್ಚಾಗುತ್ತದೆ. ಮನೆಯವರೆಲ್ಲಾ ಕೆಲಸ ಮಾಡಿದ್ದಾರೆ. ಬಿತ್ತನೆ, ಗೊಬ್ಬರ, ರಾಸಾಯನಿಕ ಸಿಂಪಡನೆ, ಕಸ ತೆಗೆಯುವುದು, ರಾಶಿ ಎಲ್ಲವೂ ಸೇರಿ ಬೆಳೆಗೆ ಲಕ್ಷದವರೆಗೆ ಖರ್ಚು ತಗುಲಿದೆ. ಧಾರಣೆ ಇಳಿಯುತ್ತಿದ್ದಂತೆ ಬೆಳೆ ನಿರ್ವಹಣೆ ಮಾಡುವುದನ್ನು ನಿಲ್ಲಿಸಿದ್ದೇವೆ ಎನ್ನುತ್ತಾರೆ ರಂಗಸ್ವಾಮಿ.

‘ಸದ್ಯ ಭಾನುವಾರದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಮದುವೆ ಮತ್ತು ಉತ್ಸವಗಳ ಅಡುಗೆಗಳಲ್ಲಿ ಬೆಳ್ಳುಳ್ಳಿ ಬಳಸಬಹುದು. ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ’ ಎಂದು ಪಟ್ಟಣದ ರುದ್ರಮ್ಮ ಹೇಳಿದರು.

ಮನೆ ಸೇರಿದ ಬೆಳ್ಳುಳ್ಳಿ ಘಮ

‘ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಬಳಕೆಗೆ ಹಿಂದೇಟು ಹಾಕಿದ್ದರು. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಧಾರಣೆ ಇಳಿದಿದ್ದು, 1 ಕೆಜಿಗೆ ₹100 ದರದಲ್ಲಿ ಸಿಗುತ್ತಿದೆ. ಇದರಿಂದ ಮನೆ ಬಳಕೆಗೆ ಹೆಚ್ಚು ಖರೀದಿಸಲು ಗ್ರಾಹಕರು ಒಲವು ತೋರಿದ್ದಾರೆ. ಭಾನುವಾರದ ಸಂತೆಯಲ್ಲಿ ಬೆಳ್ಳುಳ್ಳಿಗೆ ಬೇಡಿಕೆ ಕಂಡುಬಂದಿದೆ. ಆದರೆ, ಅನ್ನದಾತರಿಗೆ ನಷ್ಟ ತಂದಿತ್ತಿದೆ. ಇದರಿಂದ ರೈತರು ತರಾತುರಿಯಲ್ಲಿ ಕಟಾವು ಮಾಡಿ ಸೇಲಂ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ’ ಎಂದು ರೈತ ಬಸವಶೆಟ್ಟಿ ಹೇಳಿದರು.

ಮಾರಾಟಕ್ಕೆ ಸಂಗ್ರಹಿಸಿರುವ ಬೆಳ್ಳುಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.