ADVERTISEMENT

ಮಹಿಳಾ ಸಿಬ್ಬಂದಿ ಮೇಲೆ ಮೇಲ್ವಿಚಾರಕ ಹಲ್ಲೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 15:54 IST
Last Updated 4 ಜುಲೈ 2018, 15:54 IST
ಹಲ್ಲೆಯನ್ನು ಖಂಡಿಸಿ ಗಾರ್ಮೆಂಟ್ಸ್‌ನ ಮಹಿಳಾ ಸಿಬ್ಬಂದಿ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.
ಹಲ್ಲೆಯನ್ನು ಖಂಡಿಸಿ ಗಾರ್ಮೆಂಟ್ಸ್‌ನ ಮಹಿಳಾ ಸಿಬ್ಬಂದಿ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.   

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕಾಗಿ ಮೇಲ್ವಿಚಾರಕರೊಬ್ಬರು (ಸೂಪ‍ರ್‌ವೈಸರ್‌) ಲಕ್ಷ್ಮಮ್ಮ ಎಂಬ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಉತ್ತುವಳ್ಳಿ ಗ್ರಾಮದಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ನಡೆದಿದೆ.

ಹಲ್ಲೆಯನ್ನು ಖಂಡಿಸಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಬಸ್‌ ನಿಲ್ದಾಣದ ಬಳಿ ಇರುವ ಗಾರ್ಮೆಂಟ್ಸ್‌ನಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮದ ಲಕ್ಷ್ಮಮ್ಮ ಕೂಡ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮಮ್ಮ ಅವರುಬಟ್ಟೆಗೆ ಇಸ್ತ್ರಿ ಹಾಕಿದ್ದು ಸರಿಯಾಗಿಲ್ಲ ಎಂಬ ಕಾರಣಕ್ಕೆ ಆಕೆಯ ಮೇಲೆಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಮಂಜುನಾಥ್‌ ಮಂಗಳವಾರ ಸಂಜೆಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಲಕ್ಷ್ಮಮ್ಮ ಪಟ್ಟಣದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಮಂಜುನಾಥ್‌ ಅವರು ಗಾಜಿನ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ನನ್ನ ಕುತ್ತಿಗೆ ಮತ್ತು ಎದೆಗೆ ಗಾಯಗಳಾಗಿವೆ’ ಎಂದು ಲಕ್ಷ್ಮಮ್ಮ ಅವರು ರಾಮಸಮುದ್ರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ: ಹಲ್ಲೆಯನ್ನು ಖಂಡಿಸಿ ಎಲ್ಲ ಮಹಿಳಾ ಸಿಬ್ಬಂದಿ ಬುಧವಾರ ಗಾರ್ಮೆಂಟ್ಸ್‌ ಎದುರು ದಿಢೀರ್‌ ಪ್ರತಿಭಟನೆ ನಡೆಸಿದರು. ಮಂಜುನಾಥ್‌ನನ್ನು ಕೆಲಸದಿಂದ ವಜಾ ಮಾಡಬೇಕು. ಎಲ್ಲ ಮಹಿಳಾ ಸಿಬಂದಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿಷಯ ತಿಳಿದು ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ತಹಶೀಲ್ದಾರ್‌ ಪುರಂದರ ಮತ್ತು ರಾಮಸಮುದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಆನಂದೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತರ ಅಹವಾಲು ಆಲಿಸಿದರು. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.