ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಬೆಟ್ಟದ ಸೋಬಗನ್ನು ನೋಡಿ ಖುಷಿ ಪಟ್ಟರು.
ಬೆಟ್ಟಕ್ಕೆ ನೆರೆಯ ಕೇರಳ, ತಮಿಳುನಾಡು, ರಾಜ್ಯದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ ಇತರೆಡೆಗಳಿಂದ ಪ್ರವಾಸಿ ದಂಡೇ ಹರಿದು ಬಂದಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 11 ಗಂಟೆ ಜನ ಜಂಗುಳಿ ಹೆಚ್ಚಿತ್ತು. ಸರತಿ ಸಾಲಿನಲ್ಲಿ ನಿಂತು ಕೆಎಸ್ಆರ್ಟಿಸಿ ಬಸ್ ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.
ಗೋಪಾಲಸ್ವಾಮಿಗೆ ಜಯಘೋಷ ಕೂಗುತ್ತ ದೇವರ ದರ್ಶನ ಪಡೆದರು. ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬೆಟ್ಟದ ಮೇಲೆ ತಣ್ಣನೆಯ ವಾತಾರಣ ಸೃಷ್ಟಿಯಾಗಿದೆ. ಹಚ್ಚ ಹಸಿರಿನ ನಿಸರ್ಗದಲ್ಲಿ ಪ್ರವಾಸಿಗರು ಕೊರೆಯುವ ಚಳಿಯಲ್ಲಿಯೂ ಪೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು ಎಂದು ಮಾರ್ಗದರ್ಶಿ ಎಚ್.ಎಂ.ದೇವರಾಜು ಮಾಹಿತಿ ನೀಡಿದರು.
ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ 15ಕ್ಕೂ ಅಧಿಕ ಬಸ್ , ಗುಂಡ್ಲುಪೇಟೆಯಿಂದ 8ಕ್ಕೂ ಅಧಿಕ ಕೆಎಸ್ಆರ್ಟಿಸಿ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು
ಸಫಾರಿಗೂ ಲಗ್ಗೆ: ಬಂಡೀಪುರ ಸಫಾರಿಗೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಹುಲಿ, ಚಿರತೆ, ಕಾಡೆಮ್ಮೆ, ನವಿಲು, ಕಾಡಾನೆ ಇತರೆ ಕಾಡು ಪ್ರಾಣಿಗಳು ದರ್ಶನ ನೀಡಿದವು ಎಂದು ಸಫಾರಿ ಚಾಲಕರು ಮಾಹಿತಿ ನೀಡಿದ್ದರು. ಹಲವು ಮಂದಿ ಪ್ರವಾಸಿಗರು ಸಫಾರಿ ಟಿಕೆಟ್ ಸಿಗದೆ ವಾಪಸ್ಸಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.