ಗುಂಡ್ಲುಪೇಟೆ: ಪೀಠತ್ಯಾಗ ಮಾಡಿದ್ದ ನಿಜಲಿಂಗ ಸ್ವಾಮೀಜಿ (ಮಹಮ್ಮದ್ ನಿಸಾರ್) ಮುಸ್ಲಿಮರು ಧರಿಸುವ ಟೋಪಿಯನ್ನು ಆನ್ಲೈನ್ನಲ್ಲಿ ಖರೀದಿಸಿರುವುದು, ಮದ್ಯ–ಮಾಂಸ ಸೇವನೆ ಮಾಡಿದ್ದಾರೆ ಎನ್ನಲಾದ ಫೋಟೊ ಹಾಗೂ ವಿಡಿಯೊಗಳು ಹಂಚಿಕೆಯಾಗಿವೆ.
ಪೂರ್ವಾಶ್ರಮದಲ್ಲಿ ಇಸ್ಲಾಂ ಧರ್ಮದವರಾಗಿದ್ದರೆಂಬುದು ಬಯಲಾಗುತ್ತಿದ್ದಂತೆ, ತಾಲ್ಲೂಕಿನ ಚೌಡಹಳ್ಳಿಯ ಗುರು ಮಲ್ಲೇಶ್ವರ ಶಾಖಾ ಮಠದ ಪೀಠ ತ್ಯಾಗಮಾಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹಂಚಿಕೆಯಾಗಿರುವ ವಿಡಿಯೊ ಅವು ಸನ್ಯಾಸತ್ವಕ್ಕೆ ಮುಂಚಿನವೋ ಅಥವಾ ನಂತರದವೋ ಎಂಬುದು ಖಚಿತವಾಗಿಲ್ಲ.
₹ 139 ಬೆಲೆಯ ಟೋಪಿಯನ್ನು ನಿಜಲಿಂಗ ಸ್ವಾಮೀಜಿ ಹೆಸರಿನಲ್ಲಿ ಖರೀದಿಸಿರುವ ಬಿಲ್ ಪ್ರತಿ ಜಾಲತಾಣಗಳಲ್ಲಿ ಹರಿದಾಡಿದೆ. ಖರೀದಿಗೆ ಮಠದ ವಿಳಾಸವನ್ನೇ ನೀಡಲಾಗಿದೆ.
‘ಇಸ್ಲಾಂ ಧರ್ಮ ತ್ಯಜಿಸಿ, ಬಸವತತ್ವ ಸ್ವೀಕರಿಸಿದ ನಂತರವೂ ತಮ್ಮ ಧರ್ಮವನ್ನು ಬಿಂಬಿಸುವ ಟೋಪಿ ಖರೀದಿಸಿರುವುದು ಧರ್ಮದ್ರೋಹ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯು ಗೆಳೆಯರೊಟ್ಟಿಗೆ ಮದ್ಯ, ಮಾಂಸ ಪದಾರ್ಥ ಸೇವಿಸಿ ನಶೆಯಲ್ಲಿ ತೂರಾಡುತ್ತಿರುವ ಫೋಟೊ ಹಾಗೂ ವಿಡಿಯೊಗಳೂ ಟೀಕೆಗೆ ಗುರಿಯಾಗಿವೆ.
ಯಾದಗಿರಿ ಜಿಲ್ಲೆಯ ಮಹಮ್ಮದ್ ನಿಸಾರ್ (23) ಬಸವ ತತ್ವಕ್ಕೆ ಮನಸೋತು ಕೆಲ ತಿಂಗಳ ಹಿಂದೆ ಲಿಂಗದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದರು. ಈಚೆಗೆ ಅವರ ಆಧಾರ್ ಕಾರ್ಡ್ನಲ್ಲಿ ಪೂರ್ವಾಶ್ರಮದ ಧರ್ಮ ಬಯಲಾದ ಬಳಿಕ ಭಕ್ತರ ವಿರೋಧಕ್ಕೆ ಮಣಿದು ಪೀಠ ತ್ಯಜಿಸಿ, ಮಠದಿಂದ ಹೊರ ನಡೆದಿದ್ದರು. ನಂತರ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.