
ಗುಂಡ್ಲುಪೇಟೆ: ಬನ್ನಿತಾಳಪುರ ಗ್ರಾಮದ ಆರು ದೇವಸ್ಥಾನಗಳಲ್ಲಿ ಸರಣಿ ಕಳವು ಗುರುವಾರ ತಡರಾತ್ರಿ ನಡೆದಿದ್ದು, ಚಿನ್ನಾಭರಣ ಕದ್ದು, ಹುಂಡಿಯಲ್ಲಿದ್ದ ಹಣ ದೋಚಲಾಗಿದೆ.
ಗ್ರಾಮದ ಕಿಕ್ಕೇರಿ ಮಹಾಲಕ್ಷ್ಮಿ ದೇವಸ್ಥಾನ, ಸಾಗಡೆ ರಾಕಸಮ್ಮ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ, ಮಲೆಯೂರು ಮಾರಮ್ಮ ದೇವಸ್ಥಾನ, ಗೋನಳ್ಳಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಗಳಲ್ಲಿ ಸರಣಿ ಕಳವಾಗಿದ್ದು, ದೇವಾಲಯಗಳ ಬೀಗ ಒಡೆದು ಒಳಗೆ ನುಗ್ಗಿರುವ ಖದೀಮರು ಚಿನ್ನದ ತಾಳಿಗಳು, ಬೆಳ್ಳಿ ಕೊಳಲು, ಕಾಸುಗಳು, ಚಿನ್ನದ ಗುಂಡುಗಳನ್ನು ಕದ್ದು, ಗೋಲಕಗಳಿಂದ ಹಣ ದೋಚಿ ಪರಾರಿಯಾಗಿದ್ದಾರೆ.
ದಿನಗಳ ಹಿಂದೆ ಬನ್ನಿತಾಳಪುರ ಗ್ರಾಮದಲ್ಲಿ ಮಾರಿ ಹಬ್ಬ ಮಾಡಲಾಗಿತ್ತು. ದೇವಸ್ಥಾನದಲ್ಲಿ ದೇವರಿಗೆ ವಿವಿಧ ಆಭರಣಗಳಿಂದ ಅಲಂಕಾರ ಮಾಡಿರುವುದನ್ನು ಗಮನಿಸಿದ ಖದೀಮರು ಕೃತ್ಯ ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಪೊಲೀಸ್ ಸಿಐ ಮೋಹಿತ್ ಸಹದೇವ್, ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದ ಪೊಲೀಸರ ತಂಡ ಸ್ಥಳದಲ್ಲಿ ಪರಿಶೀಲಿಸಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.