ಚಾಮರಾಜನಗರ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ಜೆಎಸ್ಎಸ್ ಆಸ್ಪತ್ರೆ, ಡಾ.ಬಾಬು ಸೋಷಿಯಲ್ ವೆಲ್ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ನಿಂದ ಹೃದಯರೋಗ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ನಗರದ ಸಿದ್ದಬಸವರಾಜ ಮಹಾಸ್ವಾಮೀಜಿ ಅನುಭವ ಮಂಟಪದಲ್ಲಿ ನಡೆದ ಶಿಬಿರದಲ್ಲಿ 1,700ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮಧುಮೇಹ, ರಕ್ತದೊತ್ತಡ, ಹೃದಯ ತಪಾಸಣೆ ಮಾಡಲಾಯಿತು. ಹೃದಯ ತಪಾಸಣೆ ಭಾಗವಾಗಿ ಇಸಿಜಿ, ಇಕೊ ಪರೀಕ್ಷೆಗಳನ್ನು ನಡೆಸಲಾಯಿತು.
‘1,700 ಮಂದಿ ನೋಂದಣಿ ಮಾಡಿಕೊಂಡಿದ್ದರು. ಎಲ್ಲರಿಗೂ ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಲಾಗಿದೆ. ರೋಗ ಲಕ್ಷಣ ಇದ್ದವರಿಗೆ ಇಸಿಜಿ ಮಾಡಲಾಯಿತು. ಇಕೊ ಮಾಡಲಾಗಿದೆ. 700ರಷ್ಟು ಇಸಿಜಿ, 400ರಷ್ಟು ಇಕೊ ಮಾಡಲಾಗಿದೆ. ಆರೋಗ್ಯ ಶಿಬಿರಕ್ಕೆ ಜನರ ಸ್ಪಂದನೆ ಉತ್ತಮವಾಗಿದೆ’ ಎಂದು ಡಾ.ಬಾಬು ಸೋಷಿಯಲ್ ವೆಲ್ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಡಾ.ಎ.ಆರ್.ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಬಿರಕ್ಕೆ ಚಾಲನೆ ನೀಡಿದ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಡಾ.ಎ.ಆರ್ ಬಾಬು ಚಾಮರಾಜನಗರ–ಮೈಸೂರು ಜಿಲ್ಲೆಗಳಲ್ಲಿ 25 ವರ್ಷಗಳಿಂದಲೂ ಉತ್ತಮ ಸೇವೆ ನೀಡುವ ಮೂಲಕ ಚಿರಪರಿತರಾಗಿದ್ದಾರೆ. ಈಚೆಗೆ ಟ್ರಸ್ಟ್ ಸ್ಥಾಪಿಸಿಕೊಂಡು ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಸುತ್ತಿದ್ದರು. ಮೊದಲ ಬಾರಿಗೆ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಿ ಬಡವರ ಸೇವೆಗೆ ಮುಂದಾಗಿರುವುದು ಸಂತಸ ಉಂಟು ಮಾಡಿದೆ’ ಎಂದರು.
ಜೆಎಸ್ಎಸ್ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಗುರುಪ್ರಸಾದ ಮಾತನಾಡಿದರು. ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಬಿಜೆಪಿ ಮುಖಂಡ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಸದಸ್ಯ ಮಮತಾ, ಮುಖಂಡರಾದ ಮಹದೇವನಾಯಕ, ಸುರೇಶ್ ನಾಯಕ, ಮುಖಂಡ ಯು.ಎಂ.ಪ್ರಭುಸ್ವಾಮಿ, ಪರಮೇಶ್ವರಪ್ಪ, ವೆಂಕಟರಮಣಸ್ವಾಮಿ (ಪಾಪು), ಬಾಲಸುಬ್ರಹ್ಮಣ್ಯಂ, ಕೂಡ್ಲೂರು ಹನುಮಂತ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.