ADVERTISEMENT

ರೆಸಾರ್ಟ್‌; ಸರ್ವೆ ನಡೆಸಿ ಫೆ.25ರೊಳಗೆ ವರದಿ ಸಲ್ಲಿಸಿ: ನಿತೇಶ್ ಪಾಟೀಲ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 1:59 IST
Last Updated 6 ಫೆಬ್ರುವರಿ 2026, 1:59 IST
ಮೈಸೂರು, ಚಾಮರಾಜನಗರ, ಕೊಡುಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳ ನಿರ್ಮಾಣ ಸಂಬಂಧ ದೂರಿನ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧಿಕಾರಿಗಳ ಸಭೆ ನಡೆಸಿದರು.
ಮೈಸೂರು, ಚಾಮರಾಜನಗರ, ಕೊಡುಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿರುವ ಅಕ್ರಮ ರೆಸಾರ್ಟ್‌ಗಳ ನಿರ್ಮಾಣ ಸಂಬಂಧ ದೂರಿನ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧಿಕಾರಿಗಳ ಸಭೆ ನಡೆಸಿದರು.   

ಚಾಮರಾಜನಗರ: ಮೈಸೂರು, ಚಾಮರಾಜನಗರ, ಕೊಡುಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳ ಸರ್ವೆ ನಡೆಸಿ ಫೆ.25ರೊಳಗೆ ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕಬಿನಿ, ನಾಗರಹೊಳೆ ಬಂಡೀಪುರ ಮತ್ತು ಬಿಳಿಗಿರಂಗನ ಬೆಟ್ಟ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್‌, ಹೋಂ ಸ್ಟೇಗಳ ನಿರ್ಮಾಣ ಮಾಡಲಾಗಿದೆ ಎಂಬ ದೂರಿನ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿದ ಅವರು, ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಪರಿಸರ ಸೂಕ್ಷ್ಮ ವಲಯ ಘೋಷಣೆಯಾದ ಬಳಿಕ ರೆಸಾರ್ಟ್‌ ಹೋಂಸ್ಟೇಗಳ ನಿರ್ಮಾಣಕ್ಕೆ ಅವಕಾಶ ನೀಡಲಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಿಯಮ ಉಲ್ಲಂಘಿಸಿ ರೆಸಾರ್ಟ್‌ ನಿರ್ಮಾಣ ಮಾಡಿರುವ ದೂರಿನ ಸಂಬಂಧ ತಾಲ್ಲೂಕು, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ, ಕಂದಾಯ, ಪರಿಸರ, ಪ್ರವಾಸೋದ್ಯಮ, ಅಬಕಾರಿ ಇಲಾಖೆಗಳು ಪರಿಶೀಲನೆ ನಡೆಸಬೇಕು. ವರದಿಯನ್ವಯ ಅಕ್ರಮ ಎಸಗಿರುವುದು ಕಂಡುಬಂದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ ‘ಅಕ್ರಮ ಕುರಿತು ದಾಖಲೆ ಸಂಗ್ರಹಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಮಂತ್ರಿಗಳು ಮತ್ತು ಸಚಿವರು ಅಕ್ರಮದಲ್ಲಿ ‌ಭಾಗಿಯಾಗಿದ್ದರೆ ಸಾರ್ವಜನಿಕವಾಗಿ ನಿಲುವು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಅಧಿಕಾರಿಗಳು ಕೊಡುವ ವರದಿಯನ್ನು ಅನುಮೋದಿಸಿ, ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ, ಹುಲಿ ಯೋಜನೆಯ ಮೂಲಕ ರೈತರನ್ನು ಎದುರಿಸುವ ಅರಣ್ಯ ಇಲಾಖೆ ಕಾಡಿನೊಳಗೆ ಧಾರ್ಮಿಕ ಆಚರಣೆಗಳಿಗೂ ಅಡ್ಡಿಯನ್ನುಂಟು ಮಾಡುತ್ತಿರುವುದು ಖಂಡನೀಯ. ಅಕ್ರಮ ರೆಸಾರ್ಟ್, ಹೋಂ ಸ್ಟೇಗಳನ್ನು ತೆರವುಗೊಳಿಸಿದ್ದರೆ ಫೆ.25ರ ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.,

ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಬಿಆರ್‌ಟಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ಎನ್‌ಟಿಸಿಎ ಪ್ರತಿನಿಧಿಗಳೇ ತನಿಖೆ ನಡೆಸಿ ವರದಿ ನೀಡಿದ್ದರೂ ತೆರವುಗೊಳಿಸಲು ಕ್ರಮ ಜರುಗಿಸಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಅಧಿಕಾರಿಗಳು ಪ್ರಕರಣ ನ್ಯಾಯಾಲಯದಲ್ಲಿದ್ದು ಆದೇಶ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೇಡಗುಳಿ, ಅತ್ತೀಖಾನೆ, ಹೊನ್ನಮೇಟಿಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಗುತ್ತಿಗೆ ಅವಧಿ ಮುಗಿದರೂ ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ. ಕಾಫಿ ತೋಟಗಳಲ್ಲಿ ಬಳಕೆ ಮಾಡುವ ಕಳೆನಾಶಕದಿಂದ ವನ್ಯಜೀವಿ ಹಾಗೂ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದು ಹೊನ್ನೂರು ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.  

ರೈತರ ವಿರೋಧದ ನಡುವೆಯೂ ಮತ್ತೆ ಸಫಾರಿ ಪುನಾರಂಭಕ್ಕೆ ಲಾಬಿ ನಡೆಯುತ್ತಿದೆ. ಉದ್ಯಮಿಗಳ ಒತ್ತಡಕ್ಕೆ ಮಣಿದು ಸಫಾರಿ ಆರಂಭಿಸಿದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ , ಮುಖಂಡರಾದ ಮಲಿಯೂರು ಮಹೇಂದ್ರ, ಮುಕಡಳ್ಳಿ ರಾಜು ಸೇರಿದಂತೆ ಹಲವರು ಇದ್ದರು.

ಸಭೆ ವಿಳಂಬಕ್ಕೆ ರೈತರ ವಿರೋಧ ಘೋಷಣೆ ಕೂಗಿದ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.