
ಗುಂಡ್ಲುಪೇಟೆ: ಉನ್ನತ ಶಿಕ್ಷಣ ಮತ್ತು ಕೌಶಲ ಪಡೆದು ಒಳ್ಳೆಯ ಉದ್ಯೋಗ ಹಾಗೂ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎ.ಆರ್.ಮದನಕುಮಾರ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಹಿಳಾ ಕುಂದು ಕೊರತೆ ನಿವಾರಣೆ ಹಾಗೂ ದೌರ್ಜನ್ಯ ತಡೆ ಸಮಿತಿ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ವರದಕ್ಷಿಣೆ ಕಾನೂನು ಮತ್ತು ಮಹಿಳಾ ಹಕ್ಕುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ವರದಕ್ಷಿಣೆಯ ಬದಲು ವಧುದಕ್ಷಿಣೆ ಹೆಚ್ಚು ಚಾಲ್ತಿಯಲ್ಲಿದೆ ಎಂದು ಅಸಮಾಧಾನ ಹೊರ ಹಾಕಿದರು.
ಗಂಡು ಮಕ್ಕಳು ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯ ಉದ್ಯೋಗ ಮತ್ತು ವ್ಯಕ್ತಿತ್ವವನ್ನು ಗಳಿಸುವುದು ಬಹಳ ಮುಖ್ಯವಾಗಿದೆ. ಕಾನೂನುಗಳನ್ನು ಪ್ರತಿಯೊಬ್ಬರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಆದರೆ ಯಾರೇ ಆದರೂ ನಮ್ಮನ್ನು ಕಾಪಾಡಲು ಬಳಸಬೇಕೇ ವಿನಃ ದುರುಪಯೋಗ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ಮಹಿಳಾ ಸಮಿತಿ ಸಂಚಾಲಕಿ ಕೆ.ಎಸ್.ಜ್ಯೋತಿ, ಐಕ್ಯುಎಸಿ ಸಂಚಾಲಕ ವಿಜಯ್ ಕುಮಾರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಿ.ಬಿ.ಪವಿತ್ರ, ಇತಿಹಾಸ ವಿಭಾಗದ ಕವಿತಾ, ಗ್ರಂಥಪಾಲಕ ಶ್ರೀನಿವಾಸನಾಯಕ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಂಜುನಾಥ್, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.