ಕೊಳ್ಳೇಗಾಲ: ರೈತರ ಜಮೀನಿಗೆ ನೀರು ಹರಿಸಬೇಕಿದ್ದ ನಾಲೆಗಳಲ್ಲಿ ಹೂಳು ತುಂಬಿಕೊಂಡಿದ್ದು ಬೆಳೆಗಳಿಗೆ ಸಕಾಲಕ್ಕೆ ನೀರು ದೊರೆಯದೆ ಅನ್ನದಾತರು ಕಂಗಾಲಾಗಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿರುವ ನಾಲೆಗಳ ತುಂಬ ಕಳೆಗಿಡಗಳು ಆವರಿಸಿಕೊಂಡಿದ್ದು ನೀರು ಸರಾಗವಾಗಿ ಹರಿಯದೆ ಸಮಸ್ಯೆ ಗಂಭೀರವಾಗಿದೆ.
ನಾಲೆಗಳ ಒಳಗೆ ಕಸ, ಕಡ್ಡಿ, ತ್ಯಾಜ್ಯ ತುಂಬಿಕೊಂಡು ಕೊಳೆತು ನಾರುತ್ತಿರುವ ದೃಶ್ಯ ಎಲ್ಲೆಡೆ ಕಾಣಸಿಗುತ್ತಿದೆ. ಜಲಾಶಯಗಳಿಂದ ನಾಲೆಗಳಿಗೆ ಕರೆಕಟ್ಟೆಗಳಿಗೆ ನೀರು ಹರಿದರೂ ರೈತರ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ದೊರೆಯುತ್ತಿಲ್ಲ. ಕಾಲಕಾಲಕ್ಕೆ ನಾಲೆಗಳ ನಿರ್ವಹಣೆ ಮಾಡಬೇಕಿರುವ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ನಾಲೆಗಳನ್ನು ಸ್ವಚ್ಛಗೊಳಿಸಿಲ್ಲ, ದುರಸ್ತಿಯನ್ನೂ ಮಾಡಿಲ್ಲ. ಪರಿಣಾಮ ರೈತರು ಸಮಸ್ಯೆ ಅನುಭವಿಸಬೇಕಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ.
ಮಳೆ ನೀರು ಹಾಗೂ ನಾಲೆಯ ಮೂಲಕ ಹರಿದು ಬರುವ ನೀರನ್ನು ನಂಬಿ ತಾಲ್ಲೂಕಿನ ಬಹುಪಾಲು ರೈತರು ವ್ಯವಸಾಯ ಮಾಡುತ್ತಾರೆ. ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡದ ಪರಿಣಾಮ ಮಳೆಯ ನೀರು ನಂಬಿ ಕೃಷಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಾಲೆಗಳಲ್ಲಿ ಆಳೆತ್ತರದ ಕಳೆ ಗಿಡಗಳು ಬೆಳೆದು ನಿಂತಿವೆ. ತ್ಯಾಜ್ಯ ತುಂಬಿ ತುಳುಕುತ್ತಿವೆ.
ನೀರಾವರಿ ಇಲಾಖೆ ಅಧಿಕಾರಿಗಳು ಜಲಾಶಯಗಳಿಂದ ನೀರು ಬಿಡುವ ಮುನ್ನವೇ ನಾಲೆಗಳನ್ನು ಸ್ವಚ್ಛಪಡಿಸಿದರೆ ಸಮಸ್ಯೆ ಗಂಭೀರವಾಗುವುದಿಲ್ಲ. ಕೆಲವು ಕಡೆ ನೆಪಕ್ಕೆ ಕಾಲುವೆಗಳ ಸ್ವಚ್ಛಗೊಳಿಸಿದ್ದು ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡಿಲ್ಲ ಎಂದು ದೂರುತ್ತಾರೆ ರೈತರು.
ಕೆರೆಕಟ್ಟೆಗಳು ಭರ್ತಿಯಾಗಿಲ್ಲ
ಕಳೆದ ತಿಂಗಳು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಿಂದ ನದಿಗೆ ನೀರು ಬಿಡಲಾಗಿದ್ದರೂ ತಾಲ್ಲೂಕಿನ ಕೆರೆ ಕಟ್ಟೆಗಳು ಸಂಪೂರ್ಣವಾಗಿ ತುಂಬಿಲ್ಲ. ಚಿಕ್ಕರಂಗನಾಥನಕೆರೆ, ದೊಡ್ಡ ರಂಗನಾಥನಕೆರೆ, ಪಾಪನಕೆರೆ, ಧನಗೆರೆ ಕೆರೆ, ಪಾಳ್ಯಕೆರೆ ಸೇರಿದಂತೆ ಹಲವು ಕೆರೆಗಳು ಭರ್ತಿಯಾಗಿಲ್ಲ.
ಜಲಾಶಯಗಳಿಂದ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ನದಿಗೆ ಹರಿಯಬಿಟ್ಟಿದ್ದು ಹೊರ ರಾಜ್ಯಗಳಿಗೆ ನೀರು ತಲುಪಿದರೂ ತಾಲ್ಲೂಕಿನ ಕೆರೆಗಳು ಮಾತ್ರ ಭರ್ತಿಯಾಗಿಲ್ಲ. ಕೆರೆಕಟ್ಟೆಗಳಿಗೆ ಸಂಪರ್ಕಿಸುವ ನಾಲೆಗಳ ಹೂಳು ತೆಗೆಯದಿರುವುದು, ಕಳೆಗಿಡಗಳನ್ನು ತೆರವುಗೊಳಿಸದಿರುವುದು ಸಮಸ್ಯೆಗೆ ಕಾರಣ. ಇನ್ನಾದರೂ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಉಮೇಶ್, ಜಗದೀಶ್, ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಜಮೀನು ಜಲಾವೃತ
ಗುಂಡಾಲ್ ಜಲಾಶಯದ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ತಾಲ್ಲೂಕಿನ ಹೊಂಡರಬಾಳು, ಮಧುವನಹಳ್ಳಿ ಹಾಗೂ ಟಿ.ಸಿ ಹುಂಡಿ ಗ್ರಾಮದಲ್ಲಿ 70 ಎಕರೆಗೂ ಹೆಚ್ಚಿನ ಕೃಷಿಭೂಮಿ ಜಲಾವೃತವಾಗಿದೆ. ಭತ್ತದ ಪೈರು ನೀರಿನಲ್ಲಿ ಕೊಚ್ಚಿಹೋಗಿದೆ. ನಾಲೆಗಳನ್ನು ಸ್ವಚ್ಛಪಡಿಸಿದ್ದರೆ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತಿರಲಿಲ್ಲ.
ಅಧಿಕಾರಿಗಳು ಬೇಸಿಗೆ ಕಾಲದಲ್ಲಿ ನಾಲೆಗಳನ್ನು ದುರಸ್ತಿ ಪಡಿಸಬೇಕು, ಸ್ವಚ್ಛ ಮಾಡಬೇಕು. ನಾಲೆ ನಿರ್ವಹಣೆ ಮಾಡಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸಿಲ್ಲ. ನೀರಾವರಿ ಇಲಾಖೆ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ರೈತರಾದ ಮಹಮ್ಮದ್ ಮೊಯಿನ್, ಸೋಮಣ್ಣ, ಮಹದೇವಯ್ಯ, ಪುಟ್ಟಸ್ವಾಮಿ, ರಾಜೇಶ್, ಶಿವು, ಮಲ್ಲಯ್ಯ ದೂರಿದರು.
ವ್ಯರ್ಥವಾಗುತ್ತಿರುವ ನಾಲೆ ನೀರು
ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದಿರುವುದರಿಂದ ಕೆಲವು ಕಡೆ ಸೋರಿಕೆಯಾಗುತ್ತಿರುವುದರಿಂದ ನೀರು ವ್ಯರ್ಥವಾಗುತ್ತಿದೆ. ನಾಲೆಯ ನೀರು ರಸ್ತೆಗೆ ಹರಿಯುತ್ತಿದ್ದು ಇಳಿಜಾರಿನ ಪ್ರದೇಗಳಿಗೆ ನುಗ್ಗುತ್ತಿದೆ. ಕೆರೆ–ಕಟ್ಟೆಗಳು ತುಂಬುತ್ತಿಲ್ಲ ನಾಲೆಯಲ್ಲಿ ನೀರಿದ್ದರೂ ರೈತರಿಗೂ ಉಪಯೋಗವಾಗುತ್ತಿಲ್ಲ. ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
₹ 50 ಅನುದಾನ ಮೀಸಲು
ಮಲೆ ಮಹದೇಶ್ವರ ಬೆಟ್ಟದಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ ಇಲಾಖೆಗೆ ₹ 50 ಕೋಟಿ ಅನುದಾನ ನೀಡಲಾಗಿದೆ. ಇದನ್ನು ಬಳಸಿಕೊಂಡು ತಾಲ್ಲೂಕಿನ ಪ್ರಮುಖ ಕೆರೆಗಳನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ನಾಲೆಗಳನ್ನು ದುರಸ್ತಿ ಪಡಿಸಲಾಗುವುದು. ಮುಂದಿನ ವರ್ಷ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದು ಕಾವೇರಿ ನೀರಾವರಿ ಇಲಾಖೆ ಎಇಇ ರಾಮಕೃಷ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.