ADVERTISEMENT

ಲೋಕ ಅದಾಲತ್‌: ದಾಖಲೆ ಪ್ರಕರಣ ಇತ್ಯರ್ಥ- ಸದಾಶಿವ ಎಸ್.ಸುಲ್ತಾನ್‌ಪುರಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 16:19 IST
Last Updated 21 ಡಿಸೆಂಬರ್ 2021, 16:19 IST
ಸದಾಶಿವ ಎಸ್‌.ಸುಲ್ತಾನ್‌ಪುರಿ
ಸದಾಶಿವ ಎಸ್‌.ಸುಲ್ತಾನ್‌ಪುರಿ   

ಚಾಮರಾಜನಗರ: ಇದೇ 18ರಂದು ಜಿಲ್ಲೆಯ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ, ನ್ಯಾಯಾಲಯದಲ್ಲಿ ಬಾಕಿ ಇದ್ದ 3,522 ಹಾಗೂ 239 ವ್ಯಾಜ್ಯ ಪೂರ್ವ ಪ್ರಕರಣ ಸೇರಿದಂತೆ 3,761 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್‌ಪುರಿ ಅವರು ಮಂಗಳವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2021ರ ಸಾಲಿನಲ್ಲಿ ನಡೆದ ನಾಲ್ಕನೇ ಲೋಕ ಆದಾಲತ್ ಇದಾಗಿದ್ದು, ದಾಖಲೆ ಸಂಖ್ಯೆಯ ಪ್ರಕರಣಗಳು ಈ ಬಾರಿ ಇತ್ಯರ್ಥವಾಗಿದೆ. ಮೊದಲ ಲೋಕ ಅದಾಲತ್‌ನಲ್ಲಿ 3,271, 2ನೇ ಅದಾಲತ್‌ನಲ್ಲಿ 3,659, 3ನೇ ಅದಾಲತ್‌ನಲ್ಲಿ 2,289 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ವಿಲೇವಾರಿಯಾಗಿರುವ 3,761 ಪ್ರಕರಣಗಳಿಂದ ಒಟ್ಟು ₹5,41,24,519 ಸಂಗ್ರಹವಾಗಿದ್ದು, ಈ ಮೊತ್ತವನ್ನು ಭೂಸ್ವಾಧೀನ ಹಾಗೂ ಅಪಘಾತ ಪ್ರಕರಣಗಳ ವಿಮಾ ಪರಿಹಾರ ನೀಡಲು ಬಳಸಲಾಗುತ್ತದೆ. ಇತ್ಯರ್ಥವಾದ ಪ್ರಕರಣಗಳಿಂದ ನ್ಯಾಯಾಲಯದ ಹೊರೆ ತಗ್ಗಿದೆ. ಲೋಕ್ ಅದಾಲತ್‌ನಿಂದ ಜನಸಾಮಾನ್ಯರ ಸಮಯ, ಶ್ರಮ, ಹಣ ಉಳಿತಾಯವಾಗಿದೆ’ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.