ADVERTISEMENT

ಸಿದ್ದರಾಮಯ್ಯನವರದ್ದು ಲೂಟಿ ಸರ್ಕಾರ: ನಳಿನ್‌ ಕುಮಾರ್‌ ಕಟೀಲ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 16:29 IST
Last Updated 15 ಅಕ್ಟೋಬರ್ 2020, 16:29 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಗುರುವಾರ, ಇತ್ತೀಚೆಗೆ ನಿಧನರಾದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಗುರುಸ್ವಾಮಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮುಖಂಡ ವಿಜಯ್‌ ಶಂಕರ್‌ ಇದ್ದರು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಗುರುವಾರ, ಇತ್ತೀಚೆಗೆ ನಿಧನರಾದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಗುರುಸ್ವಾಮಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮುಖಂಡ ವಿಜಯ್‌ ಶಂಕರ್‌ ಇದ್ದರು   

ಚಾಮರಾಜನಗರ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೂಟಿ ಹೊಡೆಯುವ ಸರ್ಕಾರ ಆಗಿತ್ತು ಎಂಬುದು ಜಗಜ್ಜಾಹೀರಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ತಿರುಗೇಟು ನೀಡಿದರು.

ಬಿಜೆಪಿ ಲೂಟಿ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಅರ್ಕಾವತಿ ಪ್ರಕರಣ ಅವರ ಕಾಲದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್‌ ತಗೆದುಕೊಂಡಿದ್ದಾರೆ ಎಂಬುದನ್ನು ಅವರು ನೋಡಲಿ. ಎಲ್ಲದರಲ್ಲೂ ಲೂಟಿ ಮಾಡಿದ್ದಾರೆ’ ಎಂದರು.

ರಾಜರಾಜೇಶ್ವರಿ ನಗರ ಕ್ಷೇತ್ರ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಎಲ್ಲವನ್ನೂ ರಾಜಕಾರಣ ದೃಷ್ಟಿಯಿಂದ ನೋಡಬಾರದು.ಸಿಬಿಐ ವಿಚಾರಣೆ ನಡೆದರೆ ರಾಜಕಾರಣ, ಐಟಿ ದಾಳಿಯಾದ್ರೂ ರಾಜಕಾರಣ ಎಂದು ಬಿಂಬಿಸುವುದು ಸರಿ ಅಲ್ಲ. ಕಾಂಗ್ರೆಸ್‌ ಆಡಳಿತದಲ್ಲಿರುವಾದ ಘಟಾನುಘಟಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹಾಗಿದ್ದರೆ ಅದೆಲ್ಲಾ ಇವರೇ ಮಾಡಿದ್ದಾ?ಈ ದೇಶದ ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು’ ಎಂದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದವರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು. ಆ ಮಟಟಿ ಎಲ್ಲವನ್ನೂಕಾಮಾಲೆ ದೃಷ್ಟಿಯಿಂದ ನೋಡಿದರೆ ಇದೇ ರೀತಿ ಕಾಣುತ್ತದೆ.ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವ ರಾಜಕಾರಣದ ದೃಷ್ಟಿಯಿಂದ ಹಾಗೆ ಮಾಡಿರುವುದರಿಂದ ಈಗ ಎಲ್ಲವೂ ಅವರಿಗೆ ಅದೇ ರೀತಿ ಕಾಣುತ್ತಿದೆ.ಬಿಜೆಪಿ ಸರ್ಕಾರ ಆ ರೀತಿ ಯಾವತ್ತೂ ನಡೆದುಕೊಳ್ಳುವುದಿಲ್ಲ. ಕಾನೂನು ಪಾಲನೆ ಮಾಡುತ್ತದೆ’ ಎಂದರು.

ಗೆಲುವು ಖಚಿತ: ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಶಿರಾದಲ್ಲಿ ಕಾಂಗ್ರೆಸ್, ಬಿಜೆಪಿ ಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್ ಕಟೀಲ್‌ ಅವರು, ‘ದೇಶದ ರಾಜಕಾರಣ, ರಾಜ್ಯದ ರಾಜಕಾರಣದಲ್ಲಿ ಯಾರೂ ಯಾರ ಜೊತೆ ಇರುತ್ತಾರೆ,ಅಪ್ಪ ಯಾರ ಕಡೆ ಇರುತ್ತಾರೆ, ಮಗ ಯಾರ ಕಡೆ ಇರುತ್ತಾರೆ ಎಂಬುದು ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.

ಜೋಡೆತ್ತು ಒಂಟೆತ್ತುಗಳಾಗಿವೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರ್‌ಸ್ವಾಮಿ ಅವರು ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜೋಡೆತ್ತುಗಳು ಈಗ ಒಂಟೆತ್ತುಗಳಾಗಿವೆ. ಎರಡೂ ಬೇರೆ ಬೇರೆಯಾಗಿವೆ. ಅವುಗಳ ದಾಳಿ ನೋಡಿಕೊಂಡಿವೆ. ಒಂದು ಎತ್ತು ಓಡಿದರೆ, ಇನ್ನೊಂದು ಎತ್ತು ಓಡಿಸಿಕೊಂಡು ಬರುತ್ತಿದೆ. ಎರಡೂ ಎತ್ತುಗಳು ಪರಸ್ಪರ ಅಟ್ಟಾಡಿಸಿಕೊಂಡು ಓಡುತ್ತಿರಲಿ, ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.