ಚಾಮರಾಜನಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಕೋಡಿ ಮೋಳೆ ಕೆರೆಯ ಅಂಗಳದಲ್ಲಿರುವ ಕಳೆ ಗಿಡಗಳನ್ನು ತೆರವುಗೊಳಿಸುವ (ಜಂಗಲ್ ಕಟ್ಟಿಂಗ್) ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಕೆರೆಯಂಗಳದಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ಅವರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
‘ಶ್ರೀ ಕ್ಷೇತ್ರದಿಂದ ಬರುವ ಪ್ರಸಾದ ರೂಪದ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಈ ಪುಣ್ಯದ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.
‘ಕೊಡಿಮೋಳೆ ಕೆರೆಯು 68.23 ಎಕರೆ ವಿಸ್ತೀರ್ಣವಿದ್ದು, ಗ್ರಾಮದಲ್ಲಿ 1,240 ಕ್ಕೂ ಹೆಚ್ಚು ಕುಟುಂಬಕ್ಕೆ ನೆರವಾಗುತ್ತಿದೆ. ನಮ್ಮೂರು ನಮ್ಮ ಕೆರೆ ಯೋಜನೆಯಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹3.50 ಲಕ್ಷ ಹಾಗೂ ಗ್ರಾಮಸ್ಥರ ಪಾಲು ಹೂಳು ಸಾಗಾಟ ವೆಚ್ಚ ₹3.50 ಲಕ್ಷ ಸೇರಿದಂತೆ ₹7 ಲಕ್ಷ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕೆರೆ ಸ್ವಚ್ಛಗೊಂಡರೆ ರೈತರ 3,550 ಎಕರೆಯಷ್ಟು ತಾಕುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. 5530 ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲಿದೆ. ಅಲ್ಲದೇ ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ’ ಎಂದು ಆಶಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಕೋಡಿಮೋಳೆ ಕೆರೆ ಸಮಿತಿ ಅಧ್ಯಕ್ಷ ಗೋವಿಂದ ಶೆಟ್ಟಿ, ಚಾಮರಾಜನಗರ ತಾಲೂಕಿನ ಯೋಜನಾಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಮೈಸೂರು ಪ್ರಾದೇಶಿಕ ವಿಭಾಗದ ಕೆರೆ ಎಂಜಿನಿಯರ್ ಆದ ಪುಷ್ಪರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್, ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಮಂಜುಳಾ, ಪಂಚಾಯಿತಿ ಸದಸ್ಯರು, ಕೋಡಿ ಮೊಳೆ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಮುಖಂಡರು, ಪ್ರಗತಿ ಬಂಧು, ಸ್ವಸಹಾಯ ಸಂಘದ ಸದಸ್ಯರು, ನೋಡೆಲ್ ಅಧಿಕಾರಿ ಗೋವಿಂದ ನಾಯ್ಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.