ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದ್ದು,ಬೇಸಿಗೆಯ ರಣಬಿಸಿಲಿಗೆ ಕೆರೆ-ಕಟ್ಟೆಗಳು ಬರಿದಾಗಿವೆ. ಕೃಷಿ ಜಮೀನುಗಳು ಕೂಡ ಬರಡಾಗಲು ಆರಂಭಿಸಿದ್ದು, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ.
ಎರಡು ದಿನಗಳಿಂದ ಸಂಜೆ ಹೊತ್ತು ಮಳೆಯಾಗುತ್ತಿರುವುದು ರೈತರಲ್ಲಿ ಆಶಾಭಾವ ಮೂಡಿಸಿದೆ. ಇನ್ನೂ ಕೆಲವು ದಿನಗಳ ಕಾಲ ಈ ರೀತಿ ಮಳೆಯಾದರೆ ತೊಂದರೆ ಇಲ್ಲ. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ ಹಿರಿಯರು.
ಬಿರು ಬೇಸಿಗೆಯ ನಡುವೆಯೇ ತಾಲ್ಲೂಕಿನ ಅಲ್ಲಲ್ಲಿ ಮಳೆ ಬಿದ್ದಿದ್ದರೂ ನಗರದ ಸುತ್ತಮುತ್ತ ಒಂದು ತಿಂಗಳಿನಿಂದ ಸರಿಯಾಗಿ ಮಳೆ ಬಾರದ ಕಾರಣ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಸುತ್ತಮುತ್ತಲಿನ ಕೆರೆಗಳು ಬರಿದಾಗಿವೆ.
ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತಿದ್ದ ಪಾಪನಕೆರೆ, ಚಿಕ್ಕರಂಗನಾಥ ಕೆರೆ, ದೊಡ್ಡರಂಗನಾಥ ಕೆರೆ, ಸರಗೂರು ಕೆರೆ, ಕೊಂಗಳಗೆರೆ, ತಟ್ಟೆ ಕೆರೆ, ಹಂಪಾಪುರ ಕೆರೆ, ಮುಳ್ಳೂರು ಕೆರೆ, ತೇರಂಬಳ್ಳಿ ಕೆರೆ, ಕುಣಗಳ್ಳಿ ಕೆರೆ, ಕುಂತೂರು ಕೆರೆ, ಕುಣಗಳ್ಳಿ ಕೆರೆಗಳಲ್ಲಿ ನೀರು ತಳ ಸೇರಿವೆ.
ಮಳೆಯಾಶ್ರಿತ ಪ್ರದೇಶದ ರೈತರುಕೃಷಿ ಚಟುವಟಿಕೆಗಾಗಿ ಭೂಮಿ ಹದಗೊಳಿಸಲು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಈಗ ಬಿದ್ದಿರುವ ಮಳೆ ಉಳುಮೆ ಮಾಡಲು ಸಾಲದು ಎಂಬುದು ಅವರ ಅಭಿಪ್ರಾಯ.
ಕೃಷಿ ಚಟುವಟಿಕೆ ಕಡಿಮೆ: ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬರದೇ ಇರುವುದರಿಂದತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಕಡಿಮೆಯಾಗಿವೆ.
ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಹಾಗಾಗಿ ಏಪ್ರಿಲ್, ಮೇ ತಿಂಗಳುಗಳಲ್ಲಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದಿತ್ತು.
ದನಕರುಗಳಿಗೆ ನೀರಿಲ್ಲ:ಕೆರೆ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಮೇವಿನ ಸಮಸ್ಯೆಯು ತಲೆದೋರಲು ಆರಂಭಿಸಿದೆ.
ಸದ್ಯ ಜನರು ಮನೆಯ ಕೊಟ್ಟಿಗೆಗಳಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುತ್ತಿದ್ದಾರೆ.ತಾಲ್ಲೂಕಿನ ಪ್ರಕಾಶ್ಪಾಳ್ಯ ಗ್ರಾಮದಲ್ಲಿ ನೀರಿನ ಕೊರತೆಯಿಂದಾಗಿ 2 ಹಸುಗಳು ಮೃತಪಟ್ಟಿದ್ದವು ಎಂದು ಹೇಳುತ್ತಾರೆ ರೈತ ಚಿಕ್ಕಣ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.