ಸಿದ್ದರಾಮಯ್ಯ
ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಇಲ್ಲಿನ ಜೇನುಮಲೆ ಹಾಗೂ ವಜ್ರಮಲೆ ಅತಿಥಿಗೃಹಗಳ ಎದುರಿನ ಖಾಲಿ ಜಾಗದಲ್ಲಿ ಹಾಕಿರುವ ಜರ್ಮನ್ ಟೆಂಟ್ನಲ್ಲಿ ಗುರುವಾರ ಸಚಿವ ಸಂಪುಟ ಸಭೆ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟ ಸಹೋದ್ಯೋಗಿಗಳು ಪಾಲ್ಗೊಂಡಿದ್ದಾರೆ.
ಸಭೆಯ ಆರಂಭದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಚಾಮರಾಜನಗರ ಹಾಗೂ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆ ಮತ್ತು ಅನುದಾನ ನಿರೀಕ್ಷಿಸಲಾಗಿದೆ.
ಜರ್ಮನ್ ಟೆಂಟ್ನಲ್ಲಿ ನಡೆದ ಮೊದಲ ಸಭೆ!
ಸಚಿವ ಸಂಪುಟ ಸಭೆಯನ್ನು ಇಲ್ಲಿ ಇದೇ ಮೊದಲ ಬಾರಿಗೆ ಜರ್ಮನ್ ಟೆಂಟ್ನಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ. ಟೆಂಟ್ ಪ್ರವೇಶ ದ್ವಾರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಮೂರು ಬಾರಿ ಮುಂದೂಡಿಕೆಯಾಗಿತ್ತು: ಇಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಣಿಸಿಕೊಂಡಿದ್ದ ಮಂಡಿನೋವು ಸೇರಿದಂತೆ ವಿವಿಧ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿತ್ತು. ನಾಲ್ಕನೇ ಬಾರಿಗೆ ಸಾಕಾರಗೊಂಡಿತು.
ಮೊದಲಿಗೆ ದೀಪದಗಿರಿಒಡ್ಡಿನಲ್ಲಿ ನಡೆಸಲು ನಿರ್ಧಾರ ಮಾಡಲಾಗಿತ್ತು. ಅಲ್ಲಿ ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಎತ್ತರದ ಆ ಪ್ರದೇಶದಲ್ಲಿ ಗಾಳಿಯು ಜೋರಾಗಿ ಬೀಸುವುದರಿಂದ ಟೆಂಟ್ಗೆ ಹಾನಿಯಾಗುವ ಸಾಧ್ಯತೆ ಹಾಗೂ ಮಳೆ ಬಂದರೆ ತೀವ್ರ ತೊಂದರೆ ಆಗುತ್ತದೆಂಬ ಕಾರಣದಿಂದಾಗಿ ಜೇನುಮಲೆ ಹಾಗೂ ವಜ್ರಮಲೆ ಎದುರಿನ ಖಾಲಿ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಲ್ಲಿ ಹಾಕಿರುವ ಜರ್ಮನ್ ಟೆಂಟ್ನಲ್ಲಿ ಸಭೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.