ಯಳಂದೂರು: ತಾಲ್ಲೂಕಿನಲ್ಲಿ ಮುಸುಕಿನ ಜೋಳದ ಕೊಯ್ಲು ಬಿರುಸು ಪಡೆದಿದ್ದು ಕಟಾವಿನ ಆರಂಭದಲ್ಲಿಯೇ ಉತ್ತಮ ಬೇಡಿಕೆ ಕುದುರಿದೆ. ಈ ಬಾರಿ ಇಳುವರಿ ಹಾಗೂ ಧಾರಣೆ ಎರಡರಲ್ಲೂ ಏರಿಕೆ ಕಂಡಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
ಹೊರ ರಾಜ್ಯಗಳ ವ್ಯಾಪಾರಿಗಳು ಜೋಳ ಖರೀದಿಗೆ ಹೆಚ್ಚಿನ ಉತ್ಸಾಹ ತೋರುತ್ತಿದ್ದು ಮಧ್ಯವರ್ತಿಗಳು ಉತ್ತಮ ದರ ನೀಡಿ ರೈತರಿಂದ ಖರೀದಿಗೆ ಮುಂದಾಗಿದ್ದಾರೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 1,100 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿತ್ತು. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಮಳೆಯ ಪ್ರಮಾಣ ಕಡಿಮೆಯಾಗಿ ಜೋಳ ಬೆಳೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದರಿಂದ ಇಳುವರಿ ನಿರೀಕ್ಷೆಗಿಂತ ಹೆಚ್ಚಾಗಿ ಬಂದಿದೆ. ಎಥೆನಾಲ್ ಉತ್ಪಾದನೆಗೂ ಮೆಕ್ಕೆಜೋಳ ಬಳಕೆಯಾಗುವ ಹಿನ್ನೆಲೆಯಲ್ಲಿ ಜೋಳಕ್ಕೆ ಉತ್ತಮ ಬೆಲೆ ಬಂದಿದೆ ಎನ್ನುತ್ತಾರೆ ವ್ಯಾಪಾರಿಗಳು.
ಹಿಂದೆ ಕೋಳಿ ಮತ್ತು ಪಶು ಆಹಾರ ತಯಾರಿಸಲು ಹಾಗೂ ಇತರೆ ಸೀಮಿತ ಉದ್ಯಮಗಳಿಗೆ ಮೆಕ್ಕೆಜೋಳವನ್ನು ಬಳಕೆ ಮಾಡಲಾಗುತ್ತಿತ್ತು. ಪ್ರಸ್ತುತ ವಾಹನಗಳ ಇಂಧನದ ಜೊತೆಗೆ ಬಳಸುವ ಎಥೆನಾಲ್ ಉತ್ಪಾದನೆಗೂ ಮುಸುಕಿನ ಜೋಳ ಹೆಚ್ಚು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯಗಲಿಂದಲೂ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ. ಗುಣಟ್ಟದ ಮೆಕ್ಕೆಜೋಳ ಕ್ವಿಂಟಲ್ಗೆ ₹ 2,200ರವರೆಗೆ ದರ ಇದೆ. ಈ ಬಾರಿ 2 ಎಕರೆಯಲ್ಲಿ 90 ಕ್ವಿಂಟಲ್ ಮೆಕ್ಕೆಜೋಳದ ಇಳುವರಿ ಬಂದಿದ್ದು ಖರ್ಚು ವೆಚ್ಚ ಕಳೆದು ₹ 1.20 ಲಕ್ಷ ಆದಾಯ ನಿರೀಕ್ಷಿಸಬಹುದು ಎನ್ನುತ್ತಾರೆ ಕೃಷಿಕ ಹೊನ್ನೂರು ರಾಜೇಶ್.
ಕಬ್ಬು ಮತ್ತು ಅಕ್ಕಿಯಿಂದ ತಯಾರಿಸಲಾಗುವ ಎಥೆನಾಲ್ಗೆ ಈಚೆಗೆ ಗೋವಿನ ಜೋಳವನ್ನೂ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಸಮಯದಲ್ಲಿ ಮಳೆ ಕೊರತೆಯಿಂದ ಜೋಳದ ಇಳುವರಿ ಕುಸಿದಿದೆ. ಹವಾಮಾನ ವೈಪರೀತ್ಯ ಜೋಳದ ಬೆಲೆ ಹೆಚ್ಚಳಕ್ಕೆ ಕಾರಣ ಆಗಿರಬಹುದು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಉತ್ತಮ ತಳಿ ಇಳುವರಿ: ‘ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಮುಸುಕಿನ ಜೋಳಕ್ಕೆ ಗರಿಷ್ಠ 2,400ವರೆಗೂ ದರ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕ್ವಿಂಟಲ್ಗೆ ₹ 300ರಷ್ಟು ಹೆಚ್ಚಾಗಿದೆ. ಉತ್ತರ ಕರ್ನಾಟಕ ಬಾಗದಲ್ಲಿ ಕ್ವಿಂಟಲ್ಗೆ ಗರಿಷ್ಠ ₹ 3000ದ ವರೆಗೂ ದರ ಇದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್ಗೆ ₹ 2,330 ಬೆಂಬಲ ಬೆಲೆ ನಿಗಧಿಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದೆ. ರೈತರು ಕಟಾವು ಮಾಡಿದ ಕೂಡಲೇ ಮಾರಾಟ ಮಾಡುತ್ತಿದ್ದಾರೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.
‘ಲಾಭ ಇಳುವರಿ ಪ್ರಮಾಣ ಹೆಚ್ಚಳ’
‘110 ದಿನಗಳಲ್ಲಿ ಕಟಾವಿಗೆ ಬರುವ ಪಿಎಸಿ 751 ಹಾಗೂ ಸಿಪಿ 848 ತಳಿಯ ಮುಸುಕಿನ ಜೋಳದ ಬಿತ್ತನೆ ಬೀಜಗಗಳನ್ನು ಕೃಷಿ ಇಲಾಖೆಯಿಂದ ಪೂರೈಸಲಾಗಿತ್ತು. 1 ಎಕೆರೆಗೆ 50 ಕ್ವಿಂಟಲ್ನಷ್ಟು ಇಳುವರಿ ಸಿಕ್ಕಿದೆ. ಎಕರೆಗೆ ₹ 30000ದಷ್ಟು ಖರ್ಚಾಗಿದೆ. ವೆಚ್ಚ ಕಳೆದರೆ ₹ 70 ಸಾವಿರ ಲಾಭ ದೊರೆಯಲಿದೆ. ಎಕೆರೆಗೆ ಕನಿಷ್ಠ 30 ಕ್ವಿಂಟಲ್ ಇಳುವರಿ ಬಂದರೂ ನಷ್ಟದ ಬಾಬ್ತು ಇಲ್ಲ’ ಎನ್ನುತ್ತಾರೆ ರೈತ ಕಾಮಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.