ADVERTISEMENT

ಮಾದಪ್ಪನ ಸನ್ನಿಧಿಯಲ್ಲಿ ಜಾಗರಣೆ, ಶಿವನಾಮ ಸ್ಮರಣೆ: ಕಣ್ಮನ ಸೆಳೆದ ಕಂಡಾಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:30 IST
Last Updated 17 ಫೆಬ್ರುವರಿ 2026, 2:30 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಭಕ್ತರು 
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಭಕ್ತರು    

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು ಭಕ್ತರು ಜಾಗರಣೆ ಮಾಡುವ ಮೂಲಕ ಶಿವನ ಧ್ಯಾನ ಮಾಡಿದರು.

ದೇಗುಲದ ಪ್ರಾಂಗಣ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ಜಾಗರಣೆ ಮಾಡಿ ಭಕ್ತಿ ಸಮರ್ಪಿಸಿದರು.

ಸೋಮವಾರ ಮಹದೇಶ್ವರ ಸ್ವಾಮಿಗೆ ವಿಶೇಷ ಸೇವೆ ಪುನಸ್ಕಾರಗಳು ನಡೆದವು. ಮಂಗಳಾರತಿ ಸೇವೆ, ಗಂಧಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾರುಧ್ರಾಭಿಷೇಕ ನೆರವೇರಿದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಬೆಳ್ಳಿ ರಥದ ಸೇವೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಮಾದಪ್ಪನ ಸ್ಮರಣೆ ಮಾಡಿದರು.

ADVERTISEMENT

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಾದೇಶ್ವರ ಸ್ವಾಮಿಯ ಉಪ ದೇವಾಲಯಗಳಿಂದ ಬಂದಿದ್ದ ಕಂಡಾಯಗಳು ಗಮನ ಸೆಳೆದವು. ಕಂಡಾಯ ಮೆರವಣಿಗೆಯಲ್ಲಿ ವಾದ್ಯ, ತಮಟೆ ಸಧ್ದಿಗೆ ಭಕ್ತರು ಕುಣಿದು ಭಕ್ತಿ ಪರಾಕಾಷ್ಠೆಯಲ್ಲಿ ಮಿಂದರು. ತಮಿಳುನಾಡಿನಿಂದ ಬಂದಿದ್ದ ಭಕ್ತರು ಮಾದೇಶ್ವರನಿಗೆ ತಂದಿದ್ದ ಮೀಸಲು ಭುತ್ತಿಯನ್ನು ಎಡೆಯಿಟ್ಟು ಉಪವಾಸ ಕೈಬಿಟ್ಟರು.

ಭಕ್ತರು ಪರು ಸೇವೆ ಮಾಡಿದ ಬಳಿಕ ಕ್ಷೇತ್ರಕ್ಕೆ ಬಂದವರಿಗೆ ಅನ್ನ ಸಂತರ್ಪಣೆ ಮಾಡಿದ ದೃಶ್ಯಾವಳಿಗಳು ಕಂಡುಬಂದವು. ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ದೇಗುಲದ ಪ್ರಾಂಗಣದಲ್ಲಿ ಜನಪದ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಲೆ ಮಹದೇಶ್ವರನ ಕುರಿತ ಭಕ್ತಿ ಗೀತೆಗಳ ಗಾಯನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.