ADVERTISEMENT

ಮಹದೇಶ್ವರ ಬೆಟ್ಟ: ಅಮಾವಾಸ್ಯೆ ಜಾತ್ರೆಗೆ ಭಕ್ತರ ದಂಡು

ಪೆಂಜಿನ ಸೇವೆ, ಉರುಳು ಸೇವೆ ಮೂಲಕ ಹರಕೆ ಸಲ್ಲಿಸಿದ ಭಕ್ತರು, ಗಮನಸೆಳೆದ ಹುಲಿವಾಹನ, ಬಸವವಾಹನ ಉತ್ಸವಗಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 16:03 IST
Last Updated 2 ಜುಲೈ 2019, 16:03 IST
ಅಮಾವಾಸ್ಯೆ ಪ್ರಯುಕ್ತ, ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಹದೇಶ್ವರನ ದರ್ಶನಕ್ಕೆ ಮಂಗಳವಾರ ಬಂದಿದ್ದ ಭಕ್ತ ಸಮೂಹ
ಅಮಾವಾಸ್ಯೆ ಪ್ರಯುಕ್ತ, ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಹದೇಶ್ವರನ ದರ್ಶನಕ್ಕೆ ಮಂಗಳವಾರ ಬಂದಿದ್ದ ಭಕ್ತ ಸಮೂಹ   

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಹದೇಶ್ವರನ ಸನ್ನಿಧಿಯಲ್ಲಿ ಅಮಾವಾಸ್ಯೆ ಅಂಗವಾಗಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು.

ಸೋಮವಾರ ರಾತ್ರಿಯಿಂದಲೇ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಾಲಯದ ರಂಗಮಂದಿರದಲ್ಲಿ ಬೀಡುಬಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಮಂಗಳವಾರ ಬೆಳಿಗ್ಗೆಯಿಂದಲೇ ಎಣ್ಣೆ ಮಜ್ಜನ, ತೈಲಾಭಿಷೇಕ, ಲಕ್ಷ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಿಗೆ ದವಸ ಧಾನ್ಯಗಳನ್ನು ತೂರಿ ಹರಕೆ ಕಾಣಿಕೆ ಅರ್ಪಿಸಿದರು.

ಜಾತ್ರೆಯ ಅಂಗವಾಗಿದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್‌ ದೀಪಗಳ ಅಲಂಕಾರದಿಂದಸಿಂಗಾರಗೊಳಿಸಲಾಗಿತ್ತು. ದೇವಾಲಯದ ಹೊರಗೆ ನೆತ್ತಿಯನ್ನು ಸುಡುತ್ತಿದ್ದ ಬಿರುಬಿಸಿಲನ್ನು ಲೆಕ್ಕಿಸದೆ ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ, ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ, ಬೆಳಗಿನ ಉಪಹಾರ, ಮಧ್ಯಾಹದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ADVERTISEMENT

ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹಾಕಲಾಗಿತ್ತು. ಜತೆಗೆ, ಖಾಸಗಿ ಬಸ್‌ಗಳ ಓಡಾಟವೂ ಇತ್ತು.

ಸಂಚಾರದಟ್ಟಣೆ: ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಮಂಗಳವಾರ ಇಡೀ ದಿನ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸಂಚಾರ ದಟ್ಟಣೆ ಉಂಟಾಯಿತು. ರಂಗಸ್ವಾಮಿ ಒಡ್ಡು, ಆನೆತಲೆದಿಂಬ ಮುಂತಾದ ಕಡೆ ರಸ್ತೆ ಕಿರಿದಾಗಿದ್ದರಿಂದ ವಾಹನಗಳು ಗಂಟೆಗಟ್ಟಲೆ ಕಾದು ನಿಲ್ಲಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.