ಚಾಮರಾಜನಗರ: ‘ಪಕ್ಷಾಂತರಿ, ತತ್ವಾಂತರಿಯಾಗಿರುವ ಎಲ್.ನಾಗರಾಜು ಅವರಿಗೆ ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಎನ್.ನಾಗಯ್ಯ ಅವರ ಬಗ್ಗೆ ನೈತಿಕತೆ ಇಲ್ಲ’ ಎಂದು ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ ಭಾನುವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷ ತೊರೆದಿರುವ ನಾಗರಾಜು, ನಾಗಯ್ಯ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ. ಚುನಾವಣೆಯಿಂದ ಚುನಾವಣೆಗೆ ಪಕ್ಷದಿಂದ ಪಕ್ಷಕ್ಕೆ ಹಾರುವ ನಾಗರಾಜು, ಪಕ್ಷಾಂತರಿ ಮಾತ್ರ ಅಲ್ಲ, ತತ್ವಾಂತರಿಯಾಗಿದ್ದಾರೆ. 12 ವರ್ಷಗಳ ಹಿಂದೆ ಬಿಎಸ್ಪಿಯಲ್ಲಿದ್ದ ನಾಗರಾಜು, ಕಾಂಗ್ರೆಸ್ಗೆ ಹೋಗಿದ್ದರು. ಅಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್ ಸಿಕ್ಕಿಲ್ಲ ಎಂದು ಬಿಜೆಪಿಗೆ ಸೇರಿದ್ದರು. ಅಲ್ಲಿ ಜಿಲ್ಲಾ ಪಂಚಾಯಿತಿ ಟಿಕೆಟ್ ಪಡೆದು ಗೆದ್ದಿದ್ದರು. ಅವಧಿ ಮುಗಿದ ನಂತರ ಬಿಎಸ್ಪಿಗೆ ಬಂದಿದ್ದರು. ಈಗ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಅವರು ಯಾವುದೇ ಪಕ್ಷದಲ್ಲಿದ್ದರೂ, ಆಯಾ ಪಕ್ಷದ ತತ್ವ ಸಿದ್ಧಾಂತಕ್ಕೆ ನಿಷ್ಠರಾಗಿರುವುದಿಲ್ಲ’ ಎಂದು ದೂರಿದರು.
‘25 ವರ್ಷಗಳಿಂದ ಪಕ್ಷಕ್ಕಾಗಿ ತನು ಮನಧನ ನೀಡಿರುವ ನಾಗಯ್ಯ ಅವರು, ಎನ್.ಮಹೇಶ್ ಅವರು ಪಕ್ಷದಿಂದ ದೂರವಾದ ಬಳಿಕ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವ ಉಳಿಯಲು ಅವರು ಕಾರಣ. ಅಂತಹವರ ಬಗ್ಗೆ ಮಾತನಾಡುವ ಯೋಗ್ಯತೆ ನಾಗರಾಜು ಅವರಿಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಮಹೇಶ್, ಉಸ್ತುವಾರಿ ಪ್ರಕಾಶ್ ಅಮಚವಾಡಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೊಸ ಮೂಡಹಳ್ಳಿ, ನಗರ ಘಟಕದ ಅಧ್ಯಕ್ಷ ರಂಗಸ್ವಾಮಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.