ಸಂತೇಮರಹಳ್ಳಿ: ಸಮೀಪದ ನವಿಲೂರು ಗ್ರಾಮದಲ್ಲಿ ಶ್ರೀ ರವಳೇಶ್ವರ, ಮಸಣ್ಣಿಕಮ್ಮ ಹಾಗೂ ಬೀರೇಶ್ವರ ಜಾತ್ರಾ ಮಹೋತ್ಸವ ಈಚೆಗೆ ನಡೆಯಿತು.
ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಬಿರೇಶ್ವರ ಗದ್ದಿಗೆ ಮನೆಯಿಂದ ವಾಟಾಳ್, ಗೊದ್ದಲೆಹುಂಡಿ, ನವಿಲೂರು ಗ್ರಾಮಸ್ಥರು ತೆಂಗಿನ ಕಾಯಿ, ಬಾಳೆಹಣ್ಣು, ಹೂ ಸೇರಿ ಪೂಜಾ ವಸ್ತುಗಳ ಹೆಡಿಗೆಯನ್ನು ತಲೆ ಮೇಲೆ ಹೊತ್ತು, ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.
ನೂರಾರು ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ತಮಟೆ ಸೇರಿ ನಾನಾ ಕಲಾ ತಂಡಗಳ ಮೂಲಕ ಮೆರವಣಿಗೆಯಲ್ಲಿ ಭಾಗಿಯಾದರು. ರವಳೇಶ್ವರಸ್ವಾಮಿ ವಿಗ್ರಹವನ್ನು ಸ್ವಚ್ಫಗೊಳಿಸಿ, ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಿ, ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ರವಳೇಶ್ವರ, ಬೀರೇಶ್ವರ, ಮಸಣ್ಣಿಕ್ಕಮ್ಮ ದೇವಸ್ಥಾನ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.