ADVERTISEMENT

ಚಾಮರಾಜನಗರ: ಉಪ್ಪಿನಂಗಡಿಯಲ್ಲಿ ಲಾಠಿಚಾರ್ಜ್‌; ಪಿಎಫ್‌ಐ ಪ್ರತಿಭಟನೆ

ಉಪ್ಪಿನಂಗಡಿಯಲ್ಲಿ ಬಂಧನಕ್ಕೆ ಆಕ್ರೋಶ; ಠಾಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 16:04 IST
Last Updated 15 ಡಿಸೆಂಬರ್ 2021, 16:04 IST
ಉಪ್ಪಿನಂಗಡಿಯಲ್ಲಿ ಪ್ರತಿಭಟನನಿರತರ ಮೇಲೆ ಪೊಲೀಸರು ಲಾಠಿ ಬೀಸಿದ್ದನ್ನು ಖಂಡಿಸಿ, ಪಿಎಫ್‌ಐನ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಚಾಮರಾಜನಗರದಲ್ಲಿ ಬುಧವಾರ ಪ್ರತಿಭಟಿಸಿದರು
ಉಪ್ಪಿನಂಗಡಿಯಲ್ಲಿ ಪ್ರತಿಭಟನನಿರತರ ಮೇಲೆ ಪೊಲೀಸರು ಲಾಠಿ ಬೀಸಿದ್ದನ್ನು ಖಂಡಿಸಿ, ಪಿಎಫ್‌ಐನ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಚಾಮರಾಜನಗರದಲ್ಲಿ ಬುಧವಾರ ಪ್ರತಿಭಟಿಸಿದರು   

ಚಾಮರಾಜನಗರ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ನಾಯಕರ ಬಂಧನ ವಿರೋಧಿಸಿ ಹಾಗೂ ಬಿಡುಗಡೆಗಾಗಿ ಆಗ್ರಹಿಸಿ ಠಾಣೆ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಬರ್ಬರವಾಗಿ ಲಾಠಿ ಚಾರ್ಜ್‌ ಮಾಡಿ ದ್ದಾರೆ ಎಂದು ಆರೋಪಿಸಿ, ಪಿಎಫ್‌ಐನ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಿಎಫ್‌ಐ ಕಾರ್ಯಕರ್ತರು ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂಘಟನೆಯ ಮೂವರು ಮುಖಂಡರನ್ನು ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಯಾವುದೇ ಸೂಚನೆ ನೀಡಿರಲಿಲ್ಲ. ಬಂಧನದ ಕಾರಣವನ್ನೂ ತಿಳಿಸಿರಲಿಲ್ಲ. ಅಕ್ರಮ ಬಂಧನ ಖಂಡಿಸಿ ಪ್ರತಿಭಟನ ಕಾರರು ಠಾಣೆಯ ಮುಂದೆ ಜಮಾ ಯಿಸಿದಾಗ, ವಿಚಾರಣೆಗಾಗಿ ಕರೆದು ಕೊಂಡು ಬಂದಿದ್ದೇವೆ ಎಂದು ಪೊಲೀ ಸರು ಸಮಜಾಯಿಷಿ ನೀಡಿದ್ದರು. ಮೂವರನ್ನು ವಶಕ್ಕೆ ಪಡೆದು ವಿಚಾ ರಣೆ ನಡೆಸಲು ಪೊಲೀಸರ ಬಳಿ ಎಳ್ಳಷ್ಟು ಆಧಾರವಿರಲಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಅಮಾಯಕರನ್ನು ಬಿಡುಗಡೆ ಗೊಳಿಸಿ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಾಗ, ಬಹಳ ಸಮಯದ ನಂತರ ಒಬ್ಬರನ್ನು ಬಿಡುಗಡೆಗೊಳಿಸಿ, ಇನ್ನಿಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರದಲ್ಲಿದ್ದರು. ಉಳಿದ ಇಬ್ಬರನ್ನೂ ಬಿಡುಗಡೆಗೊಳಿಸುವಂತೆ ಪ್ರತಿಭಟನೆ ಮುಂದುವರೆಸಿದಾಗ ಪೊಲೀಸರು ಸೂಚನೆ ನೀಡದೆ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವು ಪ್ರತಿಭಟನಕಾರರು ಗಂಭೀರ ಗಾಯಗೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ಸುಳ್ಳು ಕೇಸಿನಲ್ಲಿ ಅಮಾ ಯಕರನ್ನು ಸಿಲುಕಿಸುವ ಪೊಲೀ ಸರ ಕ್ರಮ ಖಂಡನಾರ್ಹ. ಅಮಾಯಕರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಗೊಳಿಸಬೇಕು. ಅಮಾನವೀಯವಾಗಿ ಲಾಠಿ ಚಾರ್ಜ್‌ ನಡೆಸಿದ ಉಪ್ಪಿನಂಗಡಿ ಪೊಲೀಸ್‌ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಕಫೀಲ್‌ ಅಹಮದ್‌, ಕಾರ್ಯದರ್ಶಿ ಶುಯೇಬ್‌ ಖಾನ್‌, ಜಿಲ್ಲಾ ಸಮಿತಿ ಸದಸ್ಯರಾದ ಸೈಫ್‌ ಉಲ್ಲಾ, ಫರಹತ್ ಉಲ್ಲಾ, ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್‌ ಅಹಮದ್‌, ಉಪಾಧ್ಯಕ್ಷ ಸೈಯದ್‌ ಆರೀಫ್‌, ನಗರಸಭಾ ಸದಸ್ಯ ಖಲೀಲ್‌ ಉಲ್ಲಾ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.