ಹನೂರು: ಸಮೀಪದ ಕಾಮಗೆರೆ ತೋಟದ ಮನೆಯೊಂದರಲ್ಲಿ ಸಕ್ರಿಯವಾಗಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 13 ಜನರನ್ನು ಬಂಧಿಸಿ, ₹4.17 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಕಾಮಗೆರೆ ಗ್ರಾಮದ ನಂಜಣ್ಣ, ಮಧು, ಮಹೇಶ್, ಮರಿಸ್ವಾಮಿ, ಮನೋಜ್, ಕೊಂಗರಹಳ್ಳಿ ಗ್ರಾಮದ ಕುಮಾರ, ರಾಜೇಶ, ಪ್ರಶಾಂತ್ಹನೂರು ಪಟ್ಟಣದ ಕೃಷ್ಣ, ಪಾಳ್ಯ ಗ್ರಾಮದ ಮಂಜುನಾಥ, ರಾಚಪ್ಪಸ್ವಾಮಿ, ಕೊಳ್ಳೇಗಾಲ ವಿನಾಯಕ ಗುಡಿ ಬೀದಿಯ ನಟೇಶ, ಯಳಂದೂರು ತಾಲ್ಲೂಕಿನ ಅಗರ ಗ್ರಾಮದ ಮಂಟ್ಯಾಚಾರಿ ಬಂಧಿತರು.
ರಾತ್ರಿ ಕಾರ್ಯಾಚರಣೆ: ಜೂಜು ಅಡ್ಡೆಯ ಮೇಲೆ ಬುಧವಾರ ರಾತ್ರಿ 11.50ಕ್ಕೆ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಜೂಜುಕೋರರಿಂದ ಇಷ್ಟ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲು.
ಲೊಕ್ಕನಹಳ್ಳಿ-ಕಾಮಗೆರೆ ರಸ್ತೆಯಲ್ಲಿರುವ ವೆಂಕಟೇಶ್ ಎಂಬುವವರ ಜಮೀನಿನಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಪೊಲೀಸ್ ಮಾಹಿತಿದಾರರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್ ಅವರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದಲ್ಲಿ ನ್ಯಾಯಾಲಯದ ಅನುಮತಿ ಪಡೆದು, ಅನಿತಾ ಅವರ ನೇತೃತ್ವದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಹಾಗೂ ಹನೂರು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ರಾತ್ರಿ 11.50ರ ಸುಮಾರಿಗೆ ಪೊಲೀಸರ ತಂಡ ಸ್ಥಳಕ್ಕೆ ತಲುಪಿದಾಗ 13 ಮಂದಿ, ಅಂದರ್–ಬಾಹರ್ ಜೂಜಾಟದಲ್ಲಿ ತೊಡಗಿದ್ದರು. ಎಲ್ಲರನ್ನೂ ಬಂಧಿಸಿದ ಪೊಲೀಸರು ಅವರ ಬಳಿ ಇದ್ದ ₹4.17 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿಕೊಳ್ಳೇಗಾಲ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್, ಹನೂರು ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರವಿನಾಯಕ್, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿ.ಸಿ ಅಶೋಕ್ ಹಾಗೂ ಸಿಬ್ಬಂದಿ, ಹನೂರು ಠಾಣೆಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.