
ವಂಚನೆ
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ಅಧಿಕ ಬಡ್ಡಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ₹2.60 ಕೋಟಿ ವಂಚಿಸಿದ ಆರೋಪದ ಮೇರೆಗೆ ತಮಿಳುನಾಡಿನ ಡಿ.ಆರ್.ಕಾರ್ತಿ ಚಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಳೀಯ ಶಾಖೆಯ ನಾಲ್ವರು ಸಿಬ್ಬಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಯಮತ್ತೂರು ಜಿಲ್ಲೆಯ ಸತ್ಯಮಂಗಲ ನಿವಾಸಿ ಹಾಗೂ ಶಾಖೆಯ ಮುಖ್ಯಸ್ಥ ಕಾರ್ತಿಕೇಯನ್, ವ್ಯವಸ್ಥಾಪಕ, ಸತ್ತೇಗಾಲ ಗ್ರಾಮದ ಪರಮೇಶ್ವರ್, ನಗರದ ನಿವಾಸಿಗಳಾದ ಸಹಾಯಕ ವ್ಯವಸ್ಥಾಪಕ ದಿಲೀಪ್ ಹಾಗೂ ಸಿಬ್ಬಂದಿ ಚಂದ್ರು ಆರೋಪಿಗಳು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಶ್ರೀ ಗುರುಮಲ್ಲೇಶ್ವರ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿರುವ ಶಾಖೆಯ ವಿರುದ್ಧ ತಾಲ್ಲೂಕಿನ ಪಾಳ್ಯ ಗ್ರಾಮದ ನಿವಾಸಿ ಸೀಗನಾಯಕ ದೂರು ನೀಡಿದ್ದಾರೆ. ‘ನನ್ನನ್ನೂ ಸೇರಿಸಿ ಒಟ್ಟು 35 ಮಂದಿಯನ್ನು ವಂಚಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
‘₹50 ಸಾವಿರದಿಂದ ₹1 ಕೋಟಿವರೆಗೂ ಚೀಟಿ ವ್ಯವಹಾರ ನಡೆದಿದ್ದು, 2025ರ ಡಿಸೆಂಬರ್ನಲ್ಲಿ ಬಾಗಿಲು ಮುಚ್ಚಿದ ಕಂಪನಿ ಇಲ್ಲಿವರೆಗೂ ತೆರೆದಿಲ್ಲ. ತಮಿಳುನಾಡಿನ ಗೋಪಿನಾಥಂ, ಸತ್ಯಮಂಗಲ, ಕೊಯಮತ್ತೂರು ಪಟ್ಟಣದಲ್ಲೂ ಶಾಖೆಗಳಿದ್ದು, ಅಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿರುವುದಾಗಿ ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.