ADVERTISEMENT

ಎಲ್ಲ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸರಕ ಸಂಘದವರಿಂದ ಪ್ರತಿಭಟನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 11:45 IST
Last Updated 4 ಫೆಬ್ರುವರಿ 2021, 11:45 IST
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: 2020-21ನೇ ಸಾಲಿಗೆಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಲ್ಲಿ ಶೇ50 ರಷ್ಟುಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಕಾರರು ಧರಣಿ ನಡೆಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಅಧ್ಯಕ್ಷಮಲ್ಲಿಕಾರ್ಜುನ ಸ್ವಾಮಿ ಅವರು, ‘ಶೇ 50ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಹೊರಡಿಸಿರುವ ಆದೇಶ ಅವೈಜ್ಞಾನಿಕ. ಕೂಡಲೇ ಈ ಆದೇಶ ರದ್ದುಪಡಿಸಿ, ಎಲ್ಲ 14,183 ಅತಿಥಿ ಉಪನ್ಯಾಸಕರನ್ನೂ ನೇಮಿಸಿಕೊಳ್ಳಲು ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಗುರುರಾಜು ಯರಗನಹಳ್ಳಿ ಅವರು ಮಾತನಾಡಿ, ‘ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಅತಿಥಿ ಉಪನ್ಯಾಸಕರು ಹಲವು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ವಿಳಂಬ ಧೋರಣೆ ಬಿಟ್ಟು, ಮುಖ್ಯಮಂತ್ರಿ ಅವರು ಮಧ್ಯಪ್ರವೇಶ ಮಾಡಿ ವಾರದೊಳಗೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ ನಾರಾಯಣ ಅವರ ಆದೇಶದಂತೆ 2020ರ ನವೆಂಬರ್‌ 17ರಿಂದಲೇ ಅತಿಥಿ ಉಪನ್ಯಾಸಕರ ಸೇವೆ ಎಂದು ಪರಿಗಣಿಸಬೇಕು. ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಸುರಕ್ಷತೆ ದೃಷ್ಟಿಯಿಂದ ಕೋವಿಡ್-19 ಮಾರ್ಗಸೂಚಿ ಅನ್ವಯ 40:50ರ ಅನುಪಾತದಲ್ಲಿ ತರಗತಿ ವಿಭಜನೆ ಮಾಡಬೇಕು. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆಸಂಬಂಧಿಸಿದ ಕಡತವನ್ನು ಸಚಿವ ಸಂಪುಟ ಸಮಿತಿ ಮುಂದೆ ತಂದುಉದ್ಯೋಗ ಭದ್ರತೆ ಘೋಷಿಸಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಕೊಳ್ಳೇಗಾಲ ಕಾಲೇಜಿನ ಡಿ.ಕುಮಾರ್, ಲೋಕೇಶ್, ಕಬ್ಬಳ್ಳಿ ಕಾಲೇಜಿನಿಂದ ಎಚ್.ಬಿ.ಶೈಲ, ಮಹಿಳಾ ಕಾಲೇಜಿನ ತುಳಸಮ್ಮ, ಚಾಮರಾಜನಗರದಿಂದ ಸಿ.ರಾಜೇಂದ್ರ, ಎಚ್.ಎನ್.ಮನುಕುಮಾರ್, ಎಸ್.ಸಂಕಲ್ಪ, ಬಿ.ಆರ್.ಸೌಮ್ಯ, ಪಿ.ಶಾರದ, ಎಂ.ಯೋಗೇಶ್, ಎಸ್.ಬಸವಣ್ಣ, ಡಾ.ಎಚ್.ಗೋವಿಂದರಾಜು, ಎಂ.ಗೌರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.