ADVERTISEMENT

ಗ್ರಾಮಗಳಲ್ಲಿ ಸೌಕರ್ಯ ಒದಗಿಸಲು ಆಗ್ರಹ

ಮಹದೇಶ್ವರ ಬೆಟ್ಟದ ಕೊಳ್ಳೇಗಾಲ ಚೆಕ್‌ಪೋಸ್ಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 10:46 IST
Last Updated 5 ಜನವರಿ 2020, 10:46 IST
ಮಹದೇಶ್ವರ ಬೆಟ್ಟದ ಕೊಳ್ಳೇಗಾಲ ಚೆಕ್‌ಪೋಸ್ಟ್ ಬಳಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು
ಮಹದೇಶ್ವರ ಬೆಟ್ಟದ ಕೊಳ್ಳೇಗಾಲ ಚೆಕ್‌ಪೋಸ್ಟ್ ಬಳಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತೊಳಸಿಕೆರೆ, ಇಂಡಿಗನತ್ತ, ಮೆಂದರೆ, ಮೆದಗನಾಣೆ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘಟನೆಯ ಕಾರ್ಯಕರ್ತರು ಮಹದೇಶ್ವರ ಬೆಟ್ಟದ ಕೊಳ್ಳೇಗಾಲ ಚೆಕ್‌ಪೋಸ್ಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಅರಸೀಕೆರೆ ಹಾಗೂ ಇಂಡಿಗನತ್ತ ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ಬಗ್ಗೆ ಸೆಸ್ಕ್‌ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಗ್ರಾಮಕ್ಕೆ ಖಾಸಗಿ ಸಂಸ್ಥೆಯವರು ಸೌರಶಕ್ತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಅದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ 15 ದಿನಗಳೊಳಗೆ ವಿದ್ಯುತ್‌ ಸಂಪರ್ಕ ಕಲ್ಪಿಸದಿದ್ದರೆ ಮಹದೇಶ್ವರ ಬೆಟ್ಟದಲ್ಲಿ ಬಂದ್ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಸೆಸ್ಕ್ ಎಇಇ ಶಂಕರ್ ಪ್ರತಿಕ್ರಿಯಿಸಿ, ‘ಈ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ತಂಬಡಿಗೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಒಳಚರಂಡಿ ಕಾಮಗಾರಿ ಮುಗಿದ ಬಳಿಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರಮೂರ್ತಿ ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಧ್ಯಕ್ಷ ಹೊನ್ನೂರು ಪ್ರಕಾಶ್, ವಿವಿಧ ಗ್ರಾಮಗಳ ರೈತರು ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ಇದ್ದರು.

‘ನರೇಗಾದಡಿ ಕೆಲಸ ಕೊಡುತ್ತಿಲ್ಲ’

ಇಂಡಿಗನತ್ತ, ತೊಳಸಿಕೆರೆ, ಮೆಂದರೆ, ಮೆದಗನಾಣೆ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ನೀಡುತ್ತಿಲ್ಲ. ಈ ಯೋಜನೆಯಡಿ ಮಂಜೂರಾದ ಕೆಲಸಗಳನ್ನು ಜೆಸಿಬಿ ಹಾಗೂ ಇನ್ನಿತರ ಯಂತ್ರಗಳ ಸಹಾಯದಿಂದ ಮಾಡಲಾಗುತ್ತಿದೆ. ಬಡವರ ಕೆಲಸಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ರಾಜೇಶ್, ‘ಎಲ್ಲಾ ಗ್ರಾಮಗಳಿಗೂ ನರೇಗಾ ಯೋಜನೆಯಡಿ ಕೆಲಸಗಳನ್ನು ನೀಡಲಾಗುತ್ತಿದೆ. ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.