ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರವೂ ನಗರದಲ್ಲಿ ಹೋರಾಟ ನಡೆಸಿದರು. ಬಾರು ಕೋಲು ಚಳವಳಿ ನಡೆಸಿದರು.
ಚಾಮರಾಜೇಶ್ವರ ಉದ್ಯಾನವನದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ವಾಹನಗಳ ಸಂಚಾರ ತಡೆದು ತಮಿಳುನಾಡು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ತಮಿಳುನಾಡು ನೋಂದಣಿಯ ಸರಕು ಸಾಗಣೆ ಲಾರಿಯನ್ನು ತಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ‘ತಮಿಳುನಾಡಿಗೆ ನೀರು ಹರಿಸುತ್ತಿರುವುನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಶುಕ್ರವಾರ ಅಥವಾ ಶನಿವಾರ ಸ್ವಯಂ ಪ್ರೇರಿತವಾಗಿ ಚಾಮರಾಜನಗರ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ಗೋಪಾಲ್, ಚಾ.ರಾ.ಕುಮಾರ್, ಗು.ಪುರುಷೋತ್ತಮ್, ಮಹೇಶ್ಗೌಡ, ಚಾ.ಹ.ರಾಮು, ಸಾಗರ್ಸಾವತ್, ಸೋಮವಾರಪೇಟೆ ಮಂಜು, ತಾಂಡವಮೂರ್ತಿ, ವೀರಭದ್ರ, ಭೈರಲಿಂಗು, ಲಿಂಗರಾಜು, ಆಟೊ ನಾಗೇಶ್, ನಾಗಯ್ಯ, ಚಾ.ಸಿ.ಸಿದ್ದರಾಜು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.