ADVERTISEMENT

ಪಿಯು ಪರೀಕ್ಷೆ: ಯಳಂದೂರು ತಾಲ್ಲೂಕಿನಲ್ಲಿ ಬಾಲಕಿಯರೇ ಹೆಚ್ಚು

ಸಂತೇಮರಹಳ್ಳಿ, ಕುದೇರು ಸೇರಿ 4 ಪರೀಕ್ಷಾ ಕೇಂದ್ರ: ಡ್ರೈ ಡೇ ಕಾರ್ಯಾಚರಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:58 IST
Last Updated 26 ಫೆಬ್ರುವರಿ 2026, 7:58 IST
ಯಳಂದೂರು ಪಟ್ಟಣದ ಜೆಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯೂ ಪರೀಕ್ಷಾ ಪೂರ್ವ ಸಿದ್ಧತೆ (ಡ್ರೈ ಡೇ) ದಿನದ ಅಂಗವಾಗಿ ಬುಧವಾರ ಪ್ರಾಂಶುಪಾಲ ಎಚ್,ಎಸ್.ಚಂದ್ರಶೇಖರ್ ಸಿಸಿಟಿವಿ ಸಿದ್ಧತೆ ಪರಿಶೀಲಿಸಿದರು. ಉಪನ್ಯಾಸಕರಾದ ಎಂ.ಎನ್.ಕಾವ್ಯ ಹಾಗೂ ಲೋಕೇಶ್ ಇದ್ದರು.
ಯಳಂದೂರು ಪಟ್ಟಣದ ಜೆಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯೂ ಪರೀಕ್ಷಾ ಪೂರ್ವ ಸಿದ್ಧತೆ (ಡ್ರೈ ಡೇ) ದಿನದ ಅಂಗವಾಗಿ ಬುಧವಾರ ಪ್ರಾಂಶುಪಾಲ ಎಚ್,ಎಸ್.ಚಂದ್ರಶೇಖರ್ ಸಿಸಿಟಿವಿ ಸಿದ್ಧತೆ ಪರಿಶೀಲಿಸಿದರು. ಉಪನ್ಯಾಸಕರಾದ ಎಂ.ಎನ್.ಕಾವ್ಯ ಹಾಗೂ ಲೋಕೇಶ್ ಇದ್ದರು.   

ಯಳಂದೂರು: ತಾಲ್ಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದ್ದು, ಪ್ರಸಕ್ತ ಸಾಲಿನಲ್ಲಿ ಬಾಲಕರಿಗಿಂತ ಅಧಿಕ ಸಂಖ್ಯೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಸುವ್ಯವಸ್ಥಿತ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವ ಸಿದ್ಧತಾ ಹಂತದ ಕಾರ್ಯಾಚರಣೆ (ಡ್ರೈ ಡೇ) ನಡೆಸಲಾಗಿದೆ.

ಪಟ್ಟಣದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪರೀಕ್ಷೆ (ಫೆ.28 ರಿಂದ ಮಾ.17) ಗಳನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 621 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರತನಕ 23 ಕೊಠಡಿಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಹೆಚ್ಚು ಮಕ್ಕಳು ಪರೀಕ್ಷೆಗೆ ಸಿದ್ಧತೆ ನಡೆಸಿದರೆ, ಕಲಾ ವಿಭಾಗದಲ್ಲಿ ಕಡಿಮೆ ಸಂಖ್ಯೆಯ ಮಕ್ಕಳು ಇದ್ದಾರೆ. ಜೆಎಸ್ಎಸ್ ಮಹಿಳಾ ಪಿಯೂ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜುಗಳ ಜೊತೆ, ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹಾಗೂ ಕುದೇರು ಸರ್ಕಾರಿ ಕಾಲೇಜು ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ಪಟ್ಟಣದ 2 ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ನಡೆಸಲಾಗಿದೆ.

‘ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲಾ ಕೇಂದ್ರಗಳಲ್ಲಿ 30ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆ ನಡೆಯುವ ಸ್ಥಳದಿಂದ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಸೇರಿ ಝರಾಕ್ಸ್ ಅಂಗಡಿ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿದೆ. ಪ್ರತಿಯೊಂದು ಕೊಠಡಿಯ ಪರೀಕ್ಷಾ ಚಟುವಟಿಕೆಯನ್ನು ವೀಕ್ಷಿಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದು, ಈ ಸಂಬಂಧ ಪರೀಕ್ಷಾರ್ಥ ಪ್ರಯೋಗದ ಅಂಗವಾಗಿ ‘ಡ್ರೇ ಡೇ’ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜೆಸ್ಎಸ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಹೇಳಿದರು.

ADVERTISEMENT

ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ವಿತರಣೆಗೆ ತಹಶೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರ ತ್ರಿಸದಸ್ಯ ಸಮಿತಿ ರಚಿಸಿದ್ದು, ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ವ್ಯಸಸ್ಥೆ ಅಳವಡಿಸಿ, ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬಾಲಕಿಯರೇ ಹೆಚ್ಚು:

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು ಹೆಚ್ಚು ಹೆಣ್ಣು ಮಕ್ಕಳೇ ಬರೆಯುತ್ತಿದ್ದಾರೆ. ಜೆಎಸ್ಎಸ್ ಪರೀಕ್ಷಾ ಕೇಂದ್ರದಲ್ಲಿ 330 ವಿದ್ಯಾರ್ಥಿಗಳಲ್ಲಿ 275 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೆ, 55 ಗಂಡು ಮಕ್ಕಳು ಮಾತ್ರ ಇದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಒಟ್ಟು 291 ವಿದ್ಯಾರ್ಥಿಗಳಲ್ಲಿ 250 ಹೆಣ್ಣು ಮತ್ತು 141 ಗಂಡು ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ಕಲಾ ವಿಭಾಗದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ, ಕಲಾ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ವಾಣೀಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ, ಕಳೆದ ಬಾರಿ ಕಲಾ ವಿಭಾಗವನ್ನೇ ಮುಚ್ಚಬೇಕಾಯಿತು ಎಂದು ಉಪನ್ಯಾಸಕರು ಅಳಲು ತೋಡಿಕೊಂಡರು.

ವಿದ್ಯುನ್ಮಾನ ಪರಿಕರ ನಿಷೇಧ

ಪರೀಕ್ಷಾ ದಿನದಂದು ಮಕ್ಕಳು 40 ನಿಮಿಷ ಮುಂಚಿತವಾಗಿ ಹಾಜರಾಗಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ವಿದ್ಯಾರ್ಥಿಗಳು ಮೊಬೈಲ್ ರಿಸ್ಟ್ವಾಚ್ ಬ್ಲೂಟೂತ್ ಸೇರಿ ವಿದ್ಯುನ್ಮಾನ ಪರಿಕರಗಳನ್ನು ತರಲು ಅವಕಾಶ ಇಲ್ಲ. ಪರೀಕ್ಷಾ ಕೇಂದ್ರದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಇರಲಿದ್ದು ಶುದ್ಧ ನೀರು ವ್ಯವಸ್ಥೆ ಹಾಗೂ ಶುಶ್ರೂಷಕರನ್ನು ನೇಮಿಸಲಾಗಿದೆ. ಮಕ್ಕಳು ಯಾವುದೇ ಒತ್ತಡಕ್ಕೆ ಒಳಗಾಗದೇ ಸಾವಧಾನವಾಗಿ ಪರೀಕ್ಷೆ ಬರೆಯಬೇಕು ಎಂದು ಸರ್ಕಾರಿ ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕ ಸ್ಟೀವನ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.