ADVERTISEMENT

ಮಹದೇಶ್ವರ ಬೆಟ್ಟ: ಖಾಸಗಿಯವರಿಂದ ಭಕ್ತರಿಗೆ ಕೊಠಡಿ

ತಂಗಲು ಇನ್ನೂ ಅವಕಾಶ ನೀಡಿಲ್ಲ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 15:05 IST
Last Updated 13 ಸೆಪ್ಟೆಂಬರ್ 2020, 15:05 IST
ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿತ್ತು
ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿತ್ತು   

ಮಹದೇಶ್ವರ ಬೆಟ್ಟ: ಕೋವಿಡ್‌ ಕಾರಣದಿಂದ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ರಾತ್ರಿ ತಂಗಲು ಜಿಲ್ಲಾಡಳಿತ ಇನ್ನೂ ಅವಕಾಶ ನೀಡಿಲ್ಲ. ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಅತಿಥಿ ಗೃಹಗಳನ್ನು ಇನ್ನೂ ತೆರೆದಿಲ್ಲ. ಆದರೆ, ಕೆಲವು ಖಾಸಗಿ ಅತಿಥಿ ಗೃಹಗಳ ಮಾಲೀಕರು ಜಿಲ್ಲಾಧಿಕಾರಿ ಅವರ ಆದೇಶ ಉಲ್ಲಂಘಿಸಿ ಭಕ್ತರಿಗೆ ಕೊಠಡಿಗಳನ್ನು ನೀಡುತ್ತಿದ್ದಾರೆ.

ಲಾಕ್‌ಡೌನ್‌ ಅವಧಿ ಕಳೆದು, ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತಗೊಂಡ ನಂತರ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಾಧಿಕಾರ ಕೊಠಡಿಗಳನ್ನು ನೀಡದೇ ಇರುವುದರಿಂದ, ಖಾಸಗಿಯವರು ಇದೇ ಅವಕಾಶವನ್ನು ಬಳಸಿಕೊಂಡು ತಮ್ಮ ಅತಿಥಿಗೃಹಗಳನ್ನು ಭಕ್ತರಿಗೆ ನೀಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ 7 ಗಂಟೆಯ ನಂತರ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಭಕ್ತರು ವಾಪಸ್‌ ಹೋಗ‌ಬೇಕು ಎಂಬುದು ನಿಯಮ. ಆದರೆ, ಕೆಲವರು ಏಳು ಗಂಟೆಯ ನಂತರವೂ ಬರುತ್ತಿದ್ದಾರೆ. ಸಾಲೂರು ಮಠದಲ್ಲೂ ಭಕ್ತರು ವಾಸ್ತವ್ಯ ಹೂಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಯಾರಿಗೂ ಕೊಠಡಿಗಳನ್ನು ಬಾಡಿಗೆಗೆ ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಕಣ್ತಪ್ಪಿಸಿ ಕೊಠಡಿಗಳನ್ನು ನೀಡಲಾಗುತ್ತಿದೆ.

‘ರಾತ್ರಿ ತಂಗುವ ವ್ಯವಸ್ಥೆ ಇಲ್ಲ ಎಂದು ನಮಗೆ ತಿಳಿದಿರಲಿಲ್ಲ. ದೇವರ ದರ್ಶನ ಪಡೆಯಬೇಕು ಎಂಬ ಹಂಬಲದಿಂದ ಮೈಸೂರಿನಿಂದ ಬಂದಿದ್ದೇವೆ. ವಾಸ್ತವ್ಯ ಹೂಡಲು ಅವಕಾಶ ನೀಡದಿದ್ದರೆ, ನಾವು ಮತ್ತೆ ಅಷ್ಟು ದೂರದಿಂದ ಬರುವುದಕ್ಕೆ ಆಗುವುದಿಲ್ಲ. ಜಿಲ್ಲಾಡಳಿತವು ಸಂಜೆ 5 ಗಂಟೆ ನಂತರ ತಾಳಬೆಟ್ಟ ಅಥವಾ ಕೌದಳ್ಳಿಯಲ್ಲಿ ಬೆಟ್ಟಕ್ಕೆ ಹೋಗುವ ವಾಹನಗಳನ್ನು ತಡೆಯಬೇಕು’ ಎಂದು ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಮೈಸೂರಿನ ಭಕ್ತರಾದ ಮಹೇಶ್‌ ಹಾಗೂ ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಪ್ರಭಾರ ತಹಶೀಲ್ದಾರ್‌, ‘ಈ ಬಗ್ಗೆ ಮಾಹಿತಿ ಇಲ್ಲ. ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬೆಟ್ಟಕ್ಕೆ ಭಕ್ತರ ದಂಡು

ಈ ಮಧ್ಯೆ, ಭಾನುವಾರ ರಜಾ ದಿನವಾಗಿದ್ದರಿಂದ ಬೆಟ್ಟಕ್ಕೆ ಭಾರಿ ಪ್ರಮಾಣದ ಭಕ್ತರು ಭೇಟಿ ನೀಡಿದ್ದಾರೆ. ಪ್ರಾಧಿಕಾರ ನೀಡುವ ಮಾಹಿತಿ ಪ್ರಕಾರ 15 ಸಾವಿರದಿಂದ 20 ಸಾವಿರದಷ್ಟು ಭಕ್ತರು ದರ್ಶನ ಪಡೆದಿದ್ದಾರೆ.

ಹಲವು ಕಡೆಗಳಲ್ಲಿ ಭಕ್ತರು ಸುರಕ್ಷಿತ ಅಂತರ ಕಾಪಾಡಿಕೊಳ್ಳದೇ ಇದ್ದುದು ಕಂಡು ಬಂತು.

‘ಭಾನುವಾರ 15 ಸಾವಿರದಿಂದ 20 ಸಾವಿರದವರೆಗೆ ಭಕ್ತರು ಭೇಟಿ ನೀಡಿದ್ದಾರೆ. ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ್ದೇವೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲಾಗುತ್ತಿದೆ. ವಯಸ್ಸಾದವರು ಹಾಗೂ ಮಕ್ಕಳನ್ನು ರಂಗ ಮಂದಿರದಲ್ಲೇ ಇರಿಸಲಾಗಿತ್ತು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.