ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಧಾರಾಕಾರ ಮಳೆಯಾಗಿದೆ.
ಅಲ್ಲಲ್ಲಿ ಚರಂಡಿಗಳು ಕಟ್ಟಿಕೊಂಡ ಪರಿಣಾಮ, ಭಾರಿ ಪ್ರಮಾಣದಲ್ಲಿ ನೀರು ರಸ್ತೆಯಲ್ಲೇ ಹರಿಯಿತು. ಭುವನೇಶ್ವರಿ ವೃತ್ತದಿಂದ ಚಾಮರಾಜೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತು ಜನರು ಸಂಚಾರಕ್ಕೆ ಪ್ರಯಾಸ ಪಟ್ಟರು. ದ್ವಿಚಕ್ರ ವಾಹನ ಸವಾರರು, ನಿಂತಿದ್ದ ನೀರಿನಲ್ಲೇ ಗಾಡಿಯನ್ನು ಚಲಾಯಿಸಿದರು.
ಬಿ.ರಾಚಯ್ಯ ಜೋಡಿ ರಸ್ತೆಯ ಕೆಲವು ಕಡೆಗಳಲ್ಲಿ ಇನ್ನೂ ಚರಂಡಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಚರಂಡಿ ನೀರು ರಸ್ತೆಯಲ್ಲೇ ಹರಿಯಿತು. ತರಕಾರಿ ಮಾರುಕಟ್ಟೆ ಸೇರಿದಂತೆ ತಗ್ಗು ಪ್ರದೇಶಗಳಿಗೂ ನೀರು ಹರಿದು ಅವಾಂತರ ಸೃಷ್ಟಿಸಿತು.
ಮಧ್ಯಾಹ್ನವೇ ಮೋಡ ಕಪ್ಪಿಟ್ಟಲು ಆರಂಭವಾಗಿತ್ತು. 2.30ಕ್ಕೆ ಆರಂಭವಾದ ಮಳೆ ನಾಲ್ಕು ಗಂಟೆವರೆಗೆ ಸುರಿಯಿತು. ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಹೋಬಳಿಗಳಲ್ಲೂ ಉತ್ತಮ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.