
ಸಂತೇಮರಹಳ್ಳಿ: ಇಲ್ಲಿನ ಜೆಎಸ್ಎಸ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶೈಕ್ಷಣಿಕ ಹೊರ ಸಂಚಾರ ಅಂಗವಾಗಿ ಯಡಿಯೂರು ಹಾಗೂ ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರ ಬೆಟ್ಟ, ನೀರು ಶುದ್ಧೀಕರಣ ಘಟಕಕ್ಕೆ ಈಚೆಗೆ ಭೇಟಿ ನೀಡಿದರು.
ವಿದ್ಯಾರ್ಥಿಗಳು ಉತ್ಸುಕರಾಗಿ ಬೆಟ್ಟ ಹತ್ತಿ ,ಮರ ಗಿಡಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. ಬೆಟ್ಟದ ಮೇಲಿನ ಪ್ರದೇಶ ಹಾಗೂ ಅಲ್ಲಿರುವ ಗುಹೆಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ಬೆಟ್ಟದ ತಪ್ಪಲಿನಲ್ಲಿರುವ ಕಾವೇರಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದರು. ತಿ.ನರಸೀಪುರದಿಂದ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಹಾದು ಹೋಗಿರುವ ಶುದ್ಧೀಕರಣ ಘಟಕದಲ್ಲಿ ಕಾವೇರಿ ನೀರು ಶುದ್ಧಿಯಾಗಿ ಕುಡಿಯಲು ಬಳಸುವ ಬಗ್ಗೆ ತಿಳಿದುಕೊಂಡರು. ನೀರು ಶುದ್ಧೀಕರಣ ಯಂತ್ರಗಳ ಬಗ್ಗೆ ಅಲ್ಲಿನ ಸಿಬ್ಬಂದಿಯಿಂದ ತಿಳಿದುಕೊಂಡರು.
ಮುಖ್ಯ ಶಿಕ್ಷಕ ವೈ.ಪಿ.ವಿಶ್ವ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನಮಟ್ಟ ಹೆಚ್ಚಿಸಲು ಪ್ರತಿವರ್ಷ ಹೊರ ಸಂಚಾರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಬೆಟ್ಟ ಹತ್ತುವುದು ಒಂದು ಸಾಹಸದ ಕೆಲಸವಾಗಿದೆ. ಅಲ್ಲಿನ ಪರಿಸರದ ಬಗ್ಗೆ ತಿಳಿದುಕೊಳ್ಳಬಹುದು. ಕುಡಿಯಲು ಯೋಗ್ಯವಲ್ಲದ ನೀರನ್ನು ಶುದ್ಧೀಕರಿಸಿ ಕುಡಿಯುವುದು ಹೇಗೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದರು. ಶಿಕ್ಷಕರಾದ ದೀಪಿಕಾ, ರಶ್ಮಿ, ಯೋಗಾವತಿ, ದಯಾನಂದ್, ಮಲ್ಲಿಕಾರ್ಜುನ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.