
ಕೊಳ್ಳೇಗಾಲ: ತಾಲ್ಲೂಕಿನ ಉತ್ತಂಬಳ್ಳಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-948ರ ಮೇಲ್ಸೇತುವೆ ತಡೆಗೋಡೆ ಕಾಮಗಾರಿ ಮೂರು ತಿಂಗಳಿನಿಂದ ಕುಂಟುತ್ತಾ ಸಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.
ತಡೆಗೋಡೆ ನಿರ್ಮಾಣಕ್ಕೆ ಮೂರು ತಿಂಗಳ ಕಾಲಾವಕಾಶ ಅಗತ್ಯವಿದೆಯೇ ಎಂದು ಸಾರ್ವನಿಕರು ಪ್ರಶ್ನಿಸುತ್ತಿದ್ದಾರೆ.
948 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆಯುವಷ್ಟರಲ್ಲಿ ಮೂರು ತಿಂಗಳ ಹಿಂದಷ್ಟೆ ಮೇಲ್ಸೇತುವೆ ಕೆಳಗಿನ ತಡೆಗೋಡೆ ಕುಸಿದು ಬಿದ್ದಿತ್ತು. ಹೆದ್ದಾರಿ ನಿರ್ಮಾಣಗೊಂಡು ಅರ್ಧ ವರ್ಷ ತುಂಬುವ ಮುನ್ನವೇ ತಡೆಗೋಡೆ ಕುಸಿದಿರುವುದು ಕಳಪೆ ಕಾಮಗಾರಿ ನಡೆದಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.
‘ಮೂರು ತಿಂಗಳ ಹಿಂದೆ ಆರಂಭವಾದ ತಡೆಗೋಡೆ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ದುರ್ಘಟನೆ ನಡೆದಾಗ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಲ್ಲ. ಕೊಟ್ಟ ಮಾತಿಗೆ ತಪ್ಪಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
‘ತಡೆಗೋಡೆ ಕುಸಿದ ದಿನದಿಂದಲೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹೇರುವಲ್ಲಿ ಜನಪ್ರತಿನಿಧಿಗಳು ಹಾಗೂ ಸಂಸದರೂ ವಿಫಲರಾಗಿದ್ದಾರೆ’ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.
‘ಸೇತುವೆ ಕುಸಿದು ಮೂರು ತಿಂಗಳು ಕಳೆದರೂ ಸಂಸದ ಸುನಿಲ್ ಬೋಸ್ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದಾಗಲೂ ಕಾಮಗಾರಿ ಸ್ಥಳಕ್ಕೆ ಬಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಗೋಜಿಗೆ ಹೋಗಿಲ್ಲ. ಜನರ ಸಮಸ್ಯೆಗಳಿಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದ್ದಾರೆ.
‘ಈಗಲಾದರೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಅನುಕೂಲ ಮಾಡಿಕೊಡಬೇಕು. ಸಂಸದರ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭುಸ್ವಾಮಿ ತಿಳಿಸಿದರು.
ಕಾಮಗಾರಿ ಕಳಪೆ ಆರೋಪ: ಚಾಮರಾಜನಗರದಿಂದ ಆರಂಭವಾಗಿ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ ಹಾಗೂ ಸತ್ತೇಗಾಲ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಹೆದ್ದಾರಿ ಬದಿಯ ಗ್ರಾಮಸ್ಥರು, ಸಾರ್ವಜನಿಕರು, ರೈತ ಸಂಘದವರು, ಪ್ರಗತಿಪರ ಸಂಘಟನೆಯವರು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ.
‘ರಸ್ತೆ ನಿರ್ಮಾಣ ಮಾಡಿ 6 ತಿಂಗಳು ಕಳೆಯುವಷ್ಟರಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಉತ್ತಂಬಳ್ಳಿ ಬೈಪಾಸ್ ರಸ್ತೆಯಿಂದ ಸತ್ತೇಗಾಲದವರೆಗೂ ಕಾಮಗಾರಿ ಕಳಪೆಯಾಗಿದೆ. ರಸ್ತೆ ಮಾಡಬೇಕಾದರೆ ಗುಣಮಟ್ಟದ ಗ್ರಾವೆಲ್ ಮಣ್ಣನ್ನು ಹಾಕಿಲ್ಲ. ಕಾಮಗಾರಿಯ ತಳಭಾಗಕ್ಕೆ ಕೆರೆಯ ಮಣ್ಣನ್ನು ತುಂಬಿರುವುದರಿಂದ ಅಲ್ಲಲ್ಲಿ ಬಿರುಕುಗಳು ಸೃಷ್ಟಿಯಾಗಿವೆ. ಸ್ಥಳೀಯ ಮುಖಂಡರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವೈಜ್ಞಾನಿಕ ಹಾಗೂ ಅಸುರಕ್ಷಿತ ರಸ್ತೆ ನಿರ್ಮಾಣ ಮಾಡಲಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.
ಹತ್ತು ಚಕ್ರದ ಲಾರಿ ಸೇರಿದಂತೆ ಹೆಚ್ಚು ಭಾರ ಹೊರುವ ಸಾಮರ್ಥ್ಯದ ವಾಹನಗಳು ಸಂಚರಿಸಿ ಕಡೆಗಳಲ್ಲಿ ತಗ್ಗು ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಉಬ್ಬು ತಗ್ಗುಗಳನ್ನು ಕಾಣಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುಣಮಟ್ಟ ಪರಿಶೀಲಿಸಿದರೆ ಬಣ್ಣ ಬಯಲಾಗುತ್ತದೆ ಎಂದು ರೈತ ಮುಖಂಡರಾದ ಮಲ್ಲಣ್ಣ, ಶೈಲೇಂದ್ರ, ಗೌಡೇಗೌಡ ಪ್ರಜಾವಾಣಿಗೆ ತಿಳಿಸಿದರು.
‘ಮುಂದಿನವಾರ ತುರ್ತು ಸಭೆ’
‘ಮುಂದಿನ ವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ತುರ್ತುಸಭೆ ನಡೆಸಿ ಮೇಲ್ಸೇತುವೆ ಕೆಳಗಿನ ತಡೆಗೋಡೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡುತ್ತೇನೆ. ರಸ್ತೆ ಹಾಳಾಗಿರುವ ಕಡೆಗಳಲ್ಲಿ ದುರಸ್ತಿ ಮಾಡುವಂತೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ತಿಳಿಸಿದರು.
‘ಜಿಲ್ಲಾಧಿಕಾರಿ ಸಂಸದರ ಜೊತೆ ಚರ್ಚೆ’
‘ಹೆದ್ದಾರಿ ತಡೆಗೋಡೆ ಕಾಮಗಾರಿ ವೇಗಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಲು ತಿಳಿಸಲಾಗುವುದು. ಸಂಸದ ಸುನೀಲ್ ಬೋಸ್ ಅವರನ್ನು ಭೇಟಿಯಾಗಿ ಕಾಮಗಾರಿ ಪೂರ್ಣಗೊಳಿಸುವ ಸಂಬಂಬಧ ಚರ್ಚಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೂ ತಾಕೀತು ಮಾಡುತ್ತೇನೆ’ ಎಂದು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.