ಚಾಮರಾಜನಗರ: ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಹಾಗೂ ಗ್ರಾಮದ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಅದೇ ವ್ಯಕ್ತಿಯ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿರುವ ಪ್ರಕರಣ ತಾಲ್ಲೂಕಿನ ಪುಣಜನೂರಿನಲ್ಲಿ ನಡೆದಿದೆ.
ಪುಣಜನೂರು ಗ್ರಾಮದ ತಾಂಡವಮೂರ್ತಿ ಹಾಗೂ ಅವರ ಮಕ್ಕಳಾದ ಮಹೇಂದ್ರ ಮತ್ತು ಮಲ್ಲಿಕಾರ್ಜುನ ಬಂಧಿತರು.
ಗ್ರಾಮದಲ್ಲಿ ಬುಧವಾರ ನರೇಗಾ ಕೆಲಸ ನಡೆಯುತ್ತಿತ್ತು. ಇದರಲ್ಲಿ ಮಹಿಳೆಯರೂ ಭಾಗಿಯಾಗಿದ್ದರು. ಕುಡಿದ ಮತ್ತಿನಲ್ಲಿದ್ದ ತಾಂಡವಮೂರ್ತಿ ಅವರು ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಚಿತ್ರೀಕರಿಸಿದ್ದ ಕೆಲವರು, ವಿಡಿಯೊವನ್ನು ಪೊಲೀಸರಿಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ಪೊಲೀಸ್ ಠಾಣೆಯ ಸಿಬ್ಬಂದಿ ತಾಂಡವಮೂರ್ತಿ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.
‘ಇದರಿಂದ ಆಕ್ರೋಶಗೊಂಡ ತಾಂಡವಮೂರ್ತಿಯ ಮಕ್ಕಳಾದ ಮಹೇಂದ್ರ ಹಾಗೂ ಮಲ್ಲಿಕಾರ್ಜುನ ಅವರು, ತಮ್ಮ ತಂದೆಯ ಬಂಧನಕ್ಕೆ ಗ್ರಾಮದ ಮಣಿ ಹಾಗೂ ಶಾಂತರಾಜು ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
ಗಾಯಗೊಂಡಿರುವ ಮಣಿ ಹಾಗೂ ಶಾಂತರಾಜು ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನೀಡಿರುವ ದೂರಿನ ಮೇರೆಗೆ ಮಹೇಂದ್ರ ಹಾಗೂ ಮಲ್ಲಿಕಾರ್ಜುನ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪುಣಜನೂರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುವ ಪೂರ್ವ ಠಾಣೆಯ ಇನ್ಸ್ಪೆಕ್ಟರ್ ಆನಂದ್, ಸಬ್ ಇನ್ಸ್ಪೆಕ್ಟರ್ ರವಿ ಕುಮಾರ್ ಹಾಗೂ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.