ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ, ನುಗು ವನ್ಯಜೀವಿ ವಲಯದ ಲಕ್ಷ್ಮಣಾಪುರ ಗಸ್ತಿನ ಸೋರನಗುಡ್ಡ ಅರಣ್ಯ ಪ್ರದೇಶದ ಬಳಿಯ ಆನೆ ತಡೆ ಕಂದಕದಲ್ಲಿ ಹೆಣ್ಣು ಹುಲಿಯೊಂದರ ಮೃತ ದೇಹ ಪತ್ತೆಯಾಗಿದೆ.
ಸುಮಾರು 8 ರಿಂದ 9 ವರ್ಷ ವಯಸ್ಸಿನ ಹುಲಿಯ ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರ ಅಂಗಾಂಗಗಳು ಸುರಕ್ಷಿತವಾಗಿದೆ. ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವನ್ಯಜೀವಿ ಪರಿಪಾಲಕರಾದ ಕೃತಿಕ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆರ್.ರಘುರಾಮ್ ಹಾಗೂ ಸ್ಥಳೀಯ ಪಂಚಾಯಿತಿ ಸಮ್ಮುಖದಲ್ಲಿ ಹುಲಿಯ ಮೃತ ದೇಹ ಸುಡಲಾಯಿತು.
ಈ ಬಗ್ಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ಪ್ರತಿಕ್ರಿಯಿಸಿ, ಮೃತ ಹೆಣ್ಣು ಹುಲಿಯ ದೇಹವನ್ನು ಪರಿಶೀಲಿಸಿದಾಗ ಉರುಳಿ ನಿಂದ ಅಥವಾ ವಿಷ ಪ್ರಾಷನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಹುಲಿಯ ದೇಹದ ಮೇಲೆ ಗಾಯಗಳೂ ಕಂಡು ಬಂದಿಲ್ಲ. ಸರಹದ್ದಿಗಾಗಿ ಹೋರಾಟ ನಡೆಸಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿಯ ಸಾವಿಗೆ ನಿಖರ ಕಾರಣವನ್ನು ಪರೀಕ್ಷಾ ವರದಿ ಬಂದ ನಂತರ ಖಚಿತಪಡಿಸಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.