ADVERTISEMENT

ಕೊಳ್ಳೇಗಾಲ ಪ್ರವಾಸೋದ್ಯಮ: ಪ್ರಚಾರದ ಕೊರತೆ, ಭರಚುಕ್ಕಿ ಜಲಪಾತಕ್ಕೆ ಸೀಮಿತ

ಪ್ರವಾಸಿ ತಾಣಗಳಿಗೆ ಪ್ರಚಾರದ ಕೊರತೆ, ಮೂಲಸೌಕರ್ಯಗಳ ಸಮಸ್ಯೆ

ಅವಿನ್ ಪ್ರಕಾಶ್
Published 27 ಸೆಪ್ಟೆಂಬರ್ 2021, 19:30 IST
Last Updated 27 ಸೆಪ್ಟೆಂಬರ್ 2021, 19:30 IST
ಕೊಳ್ಳೇಗಾಲ ನಗರ ವ್ಯಾಪ್ತಿಯ ಮರಡಿಗುಡ್ಡದ ವೃಕ್ಷವನದಲ್ಲಿ ಇತ್ತೀಚೆಗೆ ಆರಂಭಿಸಿರುವ ಜಿಪ್‌ಲೈನ್‌ ಸಾಹಸಕ್ರೀಡೆ ಯುವ ಜನತೆಯನ್ನು ಆಕರ್ಷಿಸುತ್ತಿದೆ
ಕೊಳ್ಳೇಗಾಲ ನಗರ ವ್ಯಾಪ್ತಿಯ ಮರಡಿಗುಡ್ಡದ ವೃಕ್ಷವನದಲ್ಲಿ ಇತ್ತೀಚೆಗೆ ಆರಂಭಿಸಿರುವ ಜಿಪ್‌ಲೈನ್‌ ಸಾಹಸಕ್ರೀಡೆ ಯುವ ಜನತೆಯನ್ನು ಆಕರ್ಷಿಸುತ್ತಿದೆ   

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ, ರೇಷ್ಮೆ ನಾಡು ಕೊಳ್ಳೇಗಾಲದಲ್ಲಿ ಪ್ರವಾಸಿ ತಾಣಗಳಿಗೆ ಬರವಿಲ್ಲ. ವಿಶಾಲವಾಗಿ ಹರಿಯುವ ಕಾವೇರಿ ನದಿ, ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಐತಿಹಾಸಿಕ ದೇವಾಲಯಗಳನ್ನು ಒಡಲಲ್ಲಿ ತುಂಬಿರುವ ಐತಿಹಾಸಿಕ ತಾಲ್ಲೂಕು ಇದು.

ಸುಪ್ರಸಿದ್ಧ ಭರಚುಕ್ಕಿ ಜಲಪಾತ, ಹಜರತ್‌ ಮರ್ದಾನೆ–ಎ–ಫೇಖ್‌ ದ‌ರ್ಗಾ, ಐತಿಹಾಸಿಕ ಮಧ್ಯರಂಗ ದೇವಾಲಯ, ಶಿವನಸಮುದ್ರದ ಆದಿಶಕ್ತಿ ಮಾರಮ್ಮ ದೇವಾಲಯ, ಚಕ್ರಾಂಕಿತ ಪ‍್ರಸನ್ನ ಮೀನಾಕ್ಷಿ ಮತ್ತು ಸೋಮೇಶ್ವರ ದೇವಾಲಯ, ವೆಸ್ಲಿ ಸೇತುವೆ, ಮರಡಿಗುಡ್ಡದ ವೃಕ್ಷವನ, ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನ, ಕುರುಬನ ಕಟ್ಟೆ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯ, ಕಾವೇರಿ ನದಿ, ಹೊಂಡರಬಾಳು ಸಿದ್ದೇಶ್ವರ ಬೆಟ್ಟ, ಕುಂತೂರು ಪ್ರಭುದೇವರಾಯನ ಬೆಟ್ಟ... ಜನಮನ ಸೆಳೆಯಬಲ್ಲಂತಹ ಪ್ರವಾಸಿ ತಾಣಗಳು ಒಂದೇ ಎರಡೇ!

ಪರಿಸರ ಹಾಗೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ ಕೊಳ್ಳೇಗಾಲ. ತಾಲ್ಲೂಕಿನ ಸುತ್ತಮುತ್ತಲಿರುವ ಎಲ್ಲ ಪ್ರವಾಸಿ ತಾಣಗಳು ಮೈಸೂರಿನಿಂದ 60 ರಿಂದ 70 ಕಿ.ಮೀ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿಯಿಂದ 30ರಿಂದ 40 ಕಿ.ಮೀ ದೂರದಲ್ಲಿವೆ.

ADVERTISEMENT

ಪ್ರವಾಸೋದ್ಯಮದ ಅಭಿವೃದ್ಧಿಗೆ ತಾಲ್ಲೂಕಿನಲ್ಲಿ ವಿಪುಲ ಅವಕಾಶಗಳಿದ್ದರೂ, ಪ್ರವಾಸೋದ್ಯಮ ಇಲಾಖೆ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಭರಚುಕ್ಕಿ ಜಲಪಾತ, ಶಿವನ ಸಮುದ್ರದ ಮಧ್ಯರಂಗ ದೇವಾಲಯವನ್ನು ಬಿಟ್ಟರೆ ಉಳಿದ ತಾಣಗಳ ಬಗ್ಗೆ ಪ್ರವಾಸಿಗರಿಗೆ ತಿಳಿದಿರುವುದು ಕಡಿಮೆ.

ಭರಚುಕ್ಕಿ ಜಲಪಾತವನ್ನು ನೋಡುವುದಕ್ಕೆ ಮಾತ್ರ ತಾಲ್ಲೂಕಿಗೆ ಬರುತ್ತಾರೆ.ರಾಜ್ಯಮಾತ್ರವಲ್ಲದೇ ಹೊರ ರಾಜ್ಯಗಳ ಪ್ರವಾಸಿಗರನ್ನು ಸೆಳೆಯುವ ಪ್ರಸಿದ್ಧ ಪ್ರವಾಸಿ ತಾಣವಾದರೂ ಇಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಶೌಚಾಲಯವಿದ್ದರೂ ಹೆಚ್ಚಿನ ದಿನಗಳಲ್ಲಿ ಬಾಗಿಲು ಹಾಕಿಕೊಂಡಿರುತ್ತದೆ. ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

‘ಈ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದು ಹೆಸರಿಗಷ್ಟೇ ಇದೆ. ಆದರೆ, ಇಲ್ಲಿ ಪ್ಲಾಸ್ಟಿಕ್ ಕಸಗಳೇ ಬಿದ್ದಿರುತ್ತವೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಕೂಡ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು’ ಎಂದು ಪ್ರವಾಸಿಗ ರವಿ ಅವರು ಒತ್ತಾಯಿಸಿದರು.

ಭರಚುಕ್ಕಿಗೆ ಸಮೀಪದಲ್ಲೇ ಇರುವಹಜರತ್‌ ಮರ್ದಾನೆ–ಎ–ಫೇಖ್‌ ದ‌ರ್ಗಾದ ಆವರಣದಿಂದ ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಗಗನಚುಕ್ಕಿ ಜಲಪಾತವನ್ನು ಇನ್ನೊಂದು ಬದಿಯಿಂದ ವೀಕ್ಷಣೆ ಮಾಡುವುದಕ್ಕೂ ಅವಕಾಶ ಇದೆ. ಸಾಮರಸ್ಯದ ಕೇಂದ್ರವಾಗಿರುವ ಈ ದರ್ಗಾದ ಆವರಣದಲ್ಲೂ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ.

ಭರಚುಕ್ಕಿಗೆ ಹೋಗುವ ದಾರಿಯಲ್ಲೇ ಸಿಗುವ ವೆಸ್ಲಿ ಸೇತುವೆ, ಮಧ್ಯರಂಗ ದೇವಾಲಯಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕಾವೇರಿ ಪ್ರವಾಹಕ್ಕೆ ಸಿಕ್ಕಿ ಹಾನಿಗೀಡಾಗಿರುವ ವೆಸ್ಲಿ ಸೇತುವೆಯನ್ನು ದುರಸ್ತಿ ಮಾಡಿರುವುದೊಂದು ಸಕಾರಾತ್ಮಕ ಬೆಳವಣಿಗೆ. ಆದರೆ,‌ಈ ಸೇತುವೆಯ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಅಲ್ಲಿಲ್ಲ. ಮಧ್ಯರಂಗ ದೇವಾಲಯದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಸ್ವಚ್ಛತೆಗೆ ಇನ್ನಷ್ಟು ಮಹತ್ವ ನೀಡಬೇಕು ಎಂದು ಹೇಳುತ್ತಾರೆ ಪ್ರವಾಸಿಗರು.

ಪ್ರಚಾರದ ಕೊರತೆ: ತಾಲ್ಲೂಕಿನಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ, ಅವುಗಳ ಬಗ್ಗೆ ಜನರಿಗೆ ತಿಳಿಯುವಂತೆ ಮಾಡುವ ಪ್ರಚಾರದ ಕೊರತೆ ಎದ್ದು ಕಾಣುತ್ತದೆ. ಸ್ಥಳಗಳನ್ನು ಪರಿಚಯಿಸುವ ಹಾಗೂ ಅವುಗಳ ಮಹತ್ವವನ್ನು ತಿಳಿ ಹೇಳುವಂತಹ ವ್ಯವಸ್ಥೆ ಇಲ್ಲಿಲ್ಲ. ತಾಲ್ಲೂಕಿನಲ್ಲಿರುವ ಹಲವು ಐತಿಹಾಸಿಕ ದೇವಾಲಯಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ. ಅವುಗಳ ಪ್ರಗತಿಗೆ ಒತ್ತು ನೀಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ಜಿಪ್‌ಲೈನ್‌ ಆಕರ್ಷಣೆ: ಕೊಳ್ಳೇಗಾಲ ನಗರ ವ್ಯಾಪ್ತಿಯ ಮರಡಿಗುಡ್ಡದ ವೃಕ್ಷವನದಲ್ಲಿ ಅರಣ್ಯ ಇಲಾಖೆ ಇತ್ತೀಚೆಗೆ ಜಿಪ್‌ಲೈನ್‌ ಸಾಹಸ ಕ್ರೀಡೆ ಆರಂಭಿಸಿದೆ. ಯುವ ಜನತೆ ಇದನ್ನು ಮೆಚ್ಚಿದ್ದು, ದಿನೇ ದಿನೇ ಜನಪ್ರಿಯವಾಗುತ್ತಿದೆ. ಇಲ್ಲೂ ಕೂಡ ಮೂಲಸೌಕರ್ಯಗಳನ್ನು ಅರಣ್ಯ ಇಲಾಖೆ ಕಲ್ಪಿಸಬೇಕಾಗಿದೆ.

ಭರಚುಕ್ಕಿ ಅಭಿವೃದ್ಧಿ: ಕಡತದಲ್ಲೇ ಉಳಿದ ಪ್ರಸ್ತಾವ

ಮಲೆ ಮಹದೇಶ್ವರ ವನ್ಯಧಾಮದ ಆಡಳಿತವು (ಅರಣ್ಯ ಇಲಾಖೆ) ಭರಚುಕ್ಕಿ ಜಲಪಾತದ ಪ್ರದೇಶವನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮನಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯ ಪ್ರಸ್ತಾವವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದಿನ್ನೂ ಪ್ರಸ್ತಾವದ ಹಂತದಲ್ಲೇ ಇದೆ. ಈ ಯೋಜನೆ ಪೂರ್ಣವಾಗಿ ಅನುಷ್ಠಾನಗೊಂಡರೆ, ಭರಚುಕ್ಕಿ ಜಲಪಾತ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನ ಇಲ್ಲ.

‘ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವವನ್ನು ಸಲ್ಲಿಸಿದ್ದೇವೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೂ ಯೋಜನೆ ಇಷ್ಟವಾಗಿದೆ. ಆರಂಭದಲ್ಲಿ ₹40 ಕೋಟಿ ಅನುದಾನದ ಅಗತ್ಯವಿದೆ. ಕೋವಿಡ್‌ ಕಾರಣಕ್ಕೆ ಈ ಯೋಜನೆಯಲ್ಲಿ ಪ್ರಗತಿಯಾಗಿಲ್ಲ. ಸರ್ಕಾರ ಅನುದಾನ ಬಿಡುಗಡೆಮಾಡುವ ವಿಶ್ವಾಸ ಇದೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* ತಾಲ್ಲೂಕು ವ್ಯಾಪ್ತಿಯ ಕೆಲವು ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ನಿಜ. ಪ್ರವಾಸೋದ್ಯಮ ಇಲಾಖೆ ಜೊತೆ ಸಭೆ ನಡೆಸಿ ಸರಿಪಡಿಸಲು ಪ್ರಯತ್ನಿಸಲಾಗುವುದು.

-ಕುನಾಲ್, ತಹಶೀಲ್ದಾರ್

* ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು. ಪುರಾತನ ದೇವಾಲಯ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು.

-ಮಹಮ್ಮದ್ ಜುಹೇಬ್, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.