ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟ ವ್ಯಾಪ್ತಿಯಲ್ಲಿ ಮಳೆ ವೈಭವ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿದ್ದು, ಸಾಂಪ್ರದಾಯಿಕ ಬೆಳೆ ಪದ್ಧತಿ ಕ್ಷೀಣವಾಗುತ್ತಿದೆ. ವಾಣಿಜ್ಯ ಕೃಷಿ ಮುನ್ನೆಲೆಗೆ ಬಂದಿದೆ. ಬೇಸಾಯಗಾರರು ಹೆಚ್ಚು ವರಮಾನ ಕೊಡುವ ಬೆಳೆಗಳತ್ತ ಪಲ್ಲಟಗೊಂಡಿದ್ದಾರೆ.
ಸಾಮಾನ್ಯವಾಗಿ ದೊಡ್ಡತೇರು ಜರುಗಿದ ನಂತರ ಬಿಳಿಗಿರಿ ಬನದಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯುತ್ತವೆ. ಹಾಡಿ ಸುತ್ತಮುತ್ತ ಸೋಲಿಗರ ವಾರ್ಷಿಕ ಹೊಲಗಳ ಕೆಲಸ ಹಾಗೂ ರೊಟ್ಟಿ ಹಬ್ಬಗಳು ಒಟ್ಟೊಟ್ಟಿಗೆ ಸಾಗುತ್ತವೆ. ಬನದ ಸುತ್ತಮುತ್ತ ನೀರಾವರಿ ವ್ಯವಸ್ಥೆ ಅಷ್ಟಾಗಿ ಇಲ್ಲ. ಸೋಲಿಗರು ಮಳೆಯನ್ನೇ ನಂಬಿ ಸಾಗುವಳಿ ಮಾಡಬೇಕಿದೆ. ಮುಂಗಾರು ಪೂರ್ವದಲ್ಲಿ ಹೊಲ ಹದ ಮಾಡಿ, ಬಿತ್ತನೆ ಆರಂಭಿಸಿ, ರಾಗಿ, ಸಾಸುವೆ, ನವಣೆ, ದಂಟು ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಪ್ರತಿ ವರ್ಷ ನಿರೀಕ್ಷಿಸಿದಷ್ಟು ಬೇಗ ಬರುತ್ತಿಲ್ಲ ಎಂಬ ಕೊರಗು ಸಾಗುವಳಿದಾರರನ್ನು ಕಾಡುತ್ತಿದೆ.
‘ಬುಡಕಟ್ಟು ರೈತರು ಪ್ರತಿವರ್ಷ ಮೇ-ಜೂನ್ ನಡುವೆ ಧೂಳುಪೂಜೆ ಮತ್ತು ಭೂಮಿ ತಾಯಿ ಪೂಜೆ ನೆರವೇರಿಸಿ, ನಾಟಿಗೆ ಸಿದ್ಧತೆ ನಡೆಸುತ್ತಾರೆ. ಮೇ-ನವೆಂಬರ್ ನಡುವೆ 15 ಮಳೆ ನಕ್ಷತ್ರಗಳನ್ನು ಗುರುತಿಸಿ ಸೊಪ್ಪು, ದಂಟು, ಪಪ್ಪಾಯ, ಪೇರಳೆ, ಕುಂಬಳ, ಗೆಣಸು ನೆಟ್ಟು ಪೋಷಿಸುತ್ತಾರೆ. ಮಳೆ ಸಮೃದ್ಧತೆ ನೋಡಿಕೊಂಡು ರಾಗಿ, ಅವರೆ, ಗೆಡ್ಡೆ–ಗೆಣಸು ನಾಟಿ ಮಾಡುತ್ತಾರೆ. ಆದರೆ, ಈಚಿನ ವರ್ಷಗಳಲ್ಲಿ ಮಳೆ ಕೊರತೆ ಕಾಡುತ್ತಿರುವುದರಿಂದ ಸಾಂಪ್ರದಾಯಿಕ ಬೇಸಾಯದ ಬೆಳೆ ಪದ್ಧತಿಗಳು ನಿಧಾನವಾಗಿ ಕಡಿಮೆಯಾಗುತ್ತಿವೆ’ ಎನ್ನುತ್ತಾರೆ ಕೃಷಿಕ ಬೊಮ್ಮಯ್ಯ.
ಗಿರಿವಾಸಿಗಳು ಮಳೆ ಆರಂಭವಾಗುತ್ತಿದ್ದಂತೆ ರಸಾಯನಿಕ ಮುಕ್ತವಾಗಿ ಬೆಳೆಯುವ ತೋತಂಬು, ಹಿತ್ತಲ ಅವರೆ, ನೆಲ ಅವರೆ, ಕೊರೆಜೋಳ, ಕೆಂಪುಜೋಳ, ಹುಚ್ಚೆಳ್ಳು, ಹಸಲು, ಬಾಳೆ, ದೊಂಬೆಡ್ಡ ಸೇರಿ ಹತ್ತಾರು ಬಾಳೆ ತಳಿಗಳನ್ನು ನಾಟಿ ಮಾಡುತ್ತಿದ್ದರು. ಇದರಿಂದ ವರ್ಷಪೂರ್ತಿ ಮನೆಗೆ ಬೇಕಾದ ಕಾಳು, ಪಲ್ಯ, ಗೆಡ್ಡೆ, ಗೆಣಸು ಲಭ್ಯವಾಗುತ್ತಿತ್ತು.
ಮಳೆ ಕಾಲಕಾಲಕ್ಕೆ ಸುರಿಯದಿರುವುದರಿಂದ ನಿರೀಕ್ಷಿತ ಪ್ರಮಾಣದ ಆಹಾರ ಪದಾರ್ಥಗಳು ಕೈಸೇರಲಿಲ್ಲ. ಬದಲಿಗೆ ಬೆಳೆಗಳು ವನ್ಯಜೀವಿಗಳ ಆಹಾರಕ್ಕೆ ಬಳಕೆಯಾಯಿತು. ಇದರಿಂದ ಬೇಸತ್ತ ರೈತರು ಮೆಣಸು, ಕಾಫಿ ಬೆಳೆಗಳನ್ನು ನಾಟಿ ಮಾಡುವತ್ತ ಒತ್ತು ನೀಡಿದ್ದಾರೆ ಎನ್ನುತ್ತಾರೆ ಪುರಾಣಿಪೋಡಿನ ಸಿದ್ದೇಗೌಡ.
ವಾಣಿಜ್ಯ ಬೆಳೆಗಳ ಪ್ರಾಬಲ್ಯ: ನೂರಾರು ವರ್ಷಗಳಿಂದ ಬೆಟ್ಟದಲ್ಲಿ ವನ ಆಧಾರಿತ ಕೃಷಿ ಚಟುಚಟಿಕೆಗಳು ನಡೆಯುತ್ತಿತ್ತು. ಕಿರು ಅರಣ್ಯ ಉತ್ಪನ್ನಗಳನ್ನು ನಂಬಿ ಆದಿವಾಸಿಗಳು ಜೀವನ ಸಾಗಿಸುತ್ತಿದ್ದರು. 1980ರ ನಂತರ ಬಿಳಿಗಿರಿಬನದ ಸುತ್ತಮುತ್ತ ಕಾಫಿ, ಮೆಣಸು, ಏಲಕ್ಕಿ ಬೆಳೆಗಳು ಸೋಲಿಗ ರೈತರ ಆದಾಯದ ಪ್ರಮುಖ ಮೂಲಗಳಾದವು.
ವನಗಳಲ್ಲಿ ಮಳೆ: ‘ಈ ಬಾರಿ ದೊಡ್ಡ ಜಾತ್ರೆಯ ನಂತರ ಸಾಧಾರಣ ಮಳೆ ಸುರಿದಿದೆ. ಕೆರೆ ಕಟ್ಟೆಗಳು ತುಂಬಿಲ್ಲ. ಬೇಸಾಯಕ್ಕೆ ಹದವಾದ ಮಳೆ ಬಂದಿದ್ದು, ಕಾಫಿ, ಮೆಣಸು ಬೆಳೆಗೆ ಅನುಕೂಲ ಆಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ, ಹಣ್ಣು, ಜೇನು, ಸೊಪ್ಪು, ಸಾಸುವೆ ಬಿತ್ತನೆಗೆ ಉಪಯುಕ್ತ ಆಗಲಿದೆ’ ಎನ್ನುತ್ತಾರೆ ಬುಡಕಟ್ಟು ಕೃಷಿಕರು.
ಮುನ್ನಲೆಗೆ ಬಂದ ವಾಣಿಜ್ಯ ಕೃಷಿ
‘ಹಂದಿ ಆನೆ ಮಂಗಗಳ ಉಪಟಳದಿಂದ ಬೇಸತ್ತಿದ್ದ ಹಾಡಿ ಮಂದಿ ಸಾಂಪ್ರದಾಯಿಕ ಕೃಷಿ ಬಿಟ್ಟು ವಾಣಿಜ್ಯ ಕೃಷಿಯನ್ನು ಒಪ್ಪಿಕೊಂಡರು. ಪರಿಣಾಮ ನೂರಾರು ತಳಿಯ ಕಂದ ಮೂಲಗಳು ಬಾಳೆ ಅವರೆ ಜೋಳ ಫಸಲು ಹಿನ್ನೆಲೆಗೆ ಸರಿಯಿತು. ಇದನ್ನು ಮನಗಂಡ ಏಟ್ರೀ ಸಂಸ್ಥೆ ಸೋಲಿಗರ ವರಮಾನ ಹೆಚ್ಚಿಸಿ ಅರಣ್ಯದ ಮೇಲಿನ ಒತ್ತಡ ತಗ್ಗಿಸಲು ಬೀಜ ಸಂಗ್ರಹ ಬೆಳೆ ಸಂವರ್ಧನೆ ಕಸಿ ಗಿಡ ತಯಾರಿಕೆಯತ್ತಲೂ ನೆರವು ನೀಡುತ್ತ ಬಂದಿದೆ’ ಎಂದು ಬುಡಕಟ್ಟು ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಮಾದೇಗೌಡ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.