ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ಕೋವಿಡ್ಗೆ ಇಬ್ಬರು ಬಲಿಯಾಗಿದ್ದಾರೆ. ಶುಕ್ರವಾರವಷ್ಟೇ ಒಬ್ಬರು ಮೃತಪಟ್ಟಿದ್ದರು. ನವೆಂಬರ್ ಎರಡನೇ ವಾರದಿಂದ ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಸಾವು ಸಂಭವಿಸಿರಲಿಲ್ಲ.
ತಾಲ್ಲೂಕಿನ ಆಲೂರು ಗ್ರಾಮದ 60 ವರ್ಷದ ವ್ಯಕ್ತಿಯೊಬ್ಬರು ಇದೇ 15ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.ತಾಲ್ಲೂಕಿನ ಕುಲಗಾಣದ ನಿವಾಸಿ 70 ವರ್ಷದ ವೃದ್ಧೆ 16ರಂದು ಆಸ್ಪತ್ರೆಗೆ ದಾಖಲುಗೊಂಡಿದ್ದರು. ಅವರು ಕೂಡ ಭಾನುವಾರ ಮೃತಪಟ್ಟಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 111ಕ್ಕೆ ಏರಿದೆ. ಕೋವಿಡ್ಯೇತರ ಕಾರಣದಿಂದ 20 ಮಂದಿ ನಿಧನರಾಗಿದ್ದಾರೆ.
ಭಾನುವಾರ 14 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. 13 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಈವರೆಗಿನ ಪ್ರಕರಣಗಳ ಸಂಖ್ಯೆ 6,638ಕ್ಕೆ ಏರಿದೆ. 6,400 ಮಂದಿ ಸೋಂಕು ಮುಕ್ತರಾಗಿದ್ದಾರೆ. 107 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 60 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಐಸಿಯುನಲ್ಲಿದ್ದಾರೆ.
ಭಾನುವಾರ 771 ಮಂದಿಯ ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 760 ಮಂದಿಯ ವರದಿ ನೆಗೆಟಿವ್ ಬಂದಿವೆ. 11 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಮೂರು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.