ADVERTISEMENT

ಬಿಎಸ್‌ಪಿ ಕಾರ್ಯಕರ್ತರ ಮೇಲೆ ಹಲ್ಲೆ: ಎನ್‌.ಮಹೇಶ್‌ ಬೆಂಬಲಿಗರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:29 IST
Last Updated 5 ಡಿಸೆಂಬರ್ 2020, 15:29 IST
ನಾಸಿರ್‌ ಷರೀಫ್‌, ಜಕಾವುಲ್ಲಾ
ನಾಸಿರ್‌ ಷರೀಫ್‌, ಜಕಾವುಲ್ಲಾ   

ಕೊಳ್ಳೇಗಾಲ: ಬಿಎಸ್‌ಪಿ‌ಯ ಮೂವರು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿರುವ ಇಲ್ಲಿನ ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರಾದ ನಾಸಿರ್‌ ಷರೀಫ್‌ ಹಾಗೂ ಜಕಾವುಲ್ಲಾ ಅವರನ್ನು ಶನಿವಾರ ಬಂಧಿಸಲಾಗಿದೆ.

ಘಟನೆಯ ನಂತರ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 2ರಂದು ಬಿಎಸ್‌ಪಿ ಮುಖಂಡರಾದ ರಾಜಶೇಖರ ಮೂರ್ತಿ,ಚೈನಾರಾಂ ಕಾಪಡಿ, ರಂಗಸ್ವಾಮಿ, ಹನುಮಂತು ಅವರು ಶಾಸಕ ಎನ್‌.ಮಹೇಶ್‌ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದರು.

ADVERTISEMENT

ಇದರಿಂದ ಕೋಪಗೊಂಡಿದ್ದ ಶಾಸಕರ ಬೆಂಬಲಿಗರಾದ ನಾಸಿರ್‌ ಷರೀಫ್ ಹಾಗೂ ಜಕಾವುಲ್ಲಾ ಅವರು ಡಿ.2ರ ಸಂಜೆ ರಾಘವೇಂದ್ರ ಬ್ಯಾಂಕರ್ಸ್‌ ಅಂಗಡಿಯಲ್ಲಿಚೈನಾರಾಂ ಕಾಪಡಿ, ರಂಗಸ್ವಾಮಿ, ಹನುಮಂತು ಅವರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದರು. ಹಲ್ಲೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಹನುಮಂತು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ನಾಗರಾಜು ನೇತೃತ್ವದಲ್ಲಿ ಸಿಪಿಐ ಶ್ರೀಕಾಂತ್, ಪಿಎಸ್ಐ ತಾಜುದ್ದೀನ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿದ್ದಾರೆ.

ಬಂಧಿತ ನಾಸಿರ್‌ ಷರೀಫ್‌ ಅವರು ಕೊಳ್ಳೇಗಾಲ ನಗರಸಭೆಯ ಬಿಎಸ್‌ಪಿ ಸದಸ್ಯರೂ ಹೌದು. ಪಕ್ಷದಿಂದ ದೂರವಾಗಿರುವ ಅವರು ಶಾಸಕರೊಂದಿಗೆ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.