ADVERTISEMENT

ಚಾಮರಾಜನಗರ: ಗಡಿಯಲ್ಲಿ ಮತ್ತೆ ತಮಿಳು ನಾಮಫಲಕ ತೆರವುಗೊಳಿಸಿದ ವಾಟಾಳ್‌ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:38 IST
Last Updated 19 ಜನವರಿ 2021, 2:38 IST
ಗಡಿ ಪ್ರದೇಶದಲ್ಲಿ ಬೆಂಬಲಿಗರೊಂದಿಗೆ ವಾಟಾಳ್‌ ನಾಗರಾಜ್‌ (ವಿಡಿಯೊ ಚಿತ್ರ)
ಗಡಿ ಪ್ರದೇಶದಲ್ಲಿ ಬೆಂಬಲಿಗರೊಂದಿಗೆ ವಾಟಾಳ್‌ ನಾಗರಾಜ್‌ (ವಿಡಿಯೊ ಚಿತ್ರ)   

ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಗ್ರಾಮದ ‌ಬಳಿಯ ತಮಿಳುನಾಡಿನ ಗಡಿ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಹಾಕಿದ್ದ ತಮಿಳುಭಾಷೆ ಹಾಗೂ ಇಂಗ್ಲಿಷ್‌ ಭಾಷೆಗಳ ನಾಮಫಲಕಗಳನ್ನು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ಸೇರಿ ಭಾನುವಾರ ಸಂಜೆ ತೆರವುಗೊಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸತ್ಯಮಂಗಲ ರಸ್ತೆಯ ಕೋಳಿ ಪಾಳ್ಯದ ಬಳಿಯ ತಾಳವಾಡಿ ತಿರುವುನಲ್ಲಿರುವ ತಮಿಳು ಫಲಕಗಳನ್ನೂ ಅವರು ತೆರವುಗೊಳಿಸಿದ್ದರು. ಈ ಸಂಬಂಧ ತಮಿಳುನಾಡಿನ ಪೊಲೀಸರು ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು.

ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗ್ರಹಿಸಿ ಭಾನುವಾರ ಮಧ್ಯಾಹ್ನ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ್ದ ನಾಗರಾಜ್‌ ಅವರು, ನಂತರ ಅರಕಲವಾಡಿಯ ಮೂಲಕ ಕೊಂಗಳ್ಳಿ ಬೆಟ್ಟಕ್ಕೆ ಹೋಗುವ ರಸ್ತೆಯ ಗಡಿ ಪ್ರದೇಶಕ್ಕೆ (ಎತ್ತುಗಟ್ಟಿಬೆಟ್ಟ) ಬೆಂಬಲಿಗರೊಂದಿಗೆ ತೆರಳಿ ಫಲಕಗಳನ್ನು ತೆರವುಗೊಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ತಾಳವಾಡಿ ಕರ್ನಾಟಕಕ್ಕೆ ಸೇರಿದ್ದು. ಇದ್ದಕ್ಕಾಗಿ ಹೋರಾಟ ನಡೆಸಲಾಗುವುದು. ಈ ಪ್ರದೇಶದಲ್ಲಿ ಕನ್ನಡ ಭಾಷೆಯಲ್ಲಿಯೇ ನಾಮಫಲಕ ಹಾಕಬೇಕು. ತಾಳವಾಡಿಯನ್ನು ರಾಜ್ಯಕ್ಕೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಸರ್ವೆಕಾರ್ಯ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.